ಬಳ್ಳಾರಿ: ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೂ ಮುನ್ನ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತವಾಗಿದ್ದ ಇತಿಹಾಸಪ್ರಸಿದ್ಧ ಹಂಪಿಯಂತಹ ಕ್ಷೇತ್ರ ದೇಶದ ಯಾವುದೇ ಕಡೆ ಕಂಡುಬರುವುದಿಲ್ಲ ಎಂದು ಸಂಶೋಧಕ ಎಂ. ಚಿದಾನಂದಮೂರ್ತಿ ಹೇಳಿದರು.
ನಗರದ ಕೊಟ್ಟೂರು ಸ್ವಾಮಿ ಮಠದಲ್ಲಿ ಮಂಗಳವಾರ ವಿವಿಧ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಇಂತಹ ಪ್ರದೇಶದಲ್ಲಿನ ಹಂಪಿಹೇಮಕೂಟದ ಕೊಟ್ಟೂರು ಸ್ವಾಮಿಗಳ ಮಠ ಶೈಕ್ಷಣಿಕವಾಗಿ ಅಪಾರ ಕೊಡುಗೆ ನೀಡಿದೆ ಎಂದು ಅವರು ಹೇಳಿದರು.
ಕರ್ನಾಟಕವೆಂದರೆ 12ನೇ ಶತಮಾನದ ಶರಣರ ಆಂದೋಲನ ಹಾಗೂ ಕ್ರಾಂತಿ ನೆನಪಿಗೆ ತರುತ್ತದೆ. ಶರಣರು ನಡೆದ ಹಾದಿಯನ್ನೇ ಪ್ರತಿಯೊಬ್ಬರೂ ಅನುಸರಿಸಬೇಕು ಎಂದು ಸಲಹೆ ನೀಡಿದರು. ಚಿಕ್ಕತೊಟ್ಲಕೇರಿಯ ಅಟವಿಸ್ವಾಮಿ ಮಠದ ಅಟವಿ ಶಿವಲಿಂಗ ಸ್ವಾಮೀಜಿ, ಕೊಟ್ಟೂರು ಸ್ವಾಮಿ ಮಠದ ಸಂಗನಬಸವ ಸ್ವಾಮೀಜಿ ಆಶೀರ್ವಚನ ನೀಡಿದರು.
ನಿವೃತ್ತ ನ್ಯಾಯಮೂರ್ತಿ ವಿ.ಎಸ್. ಮಳೀಮಠ, ಶ್ಯಾಮನೂರು ಶಿವಶಂಕರಪ್ಪ, ಶಾಸಕ ವೀರಣ್ಣ ಚರಂತಿಮಠ ಅವರನ್ನು ಸತ್ಕರಿಸಲಾಯಿತು. ಳಬಳ್ಳಾರಿಯ ಸಿದ್ಧಲಿಂಗ ಸ್ವಾಮೀಜಿ, ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಕೋಡಿಮಠದ ಶಿವಾನಂದ ರಾಜಯೋಗೀಂದ್ರ ಸ್ವಾಮೀಜಿ, ಅಲ್ಲಂ ವೀರಭದ್ರಪ್ಪ, ಮೃತ್ಯುಂಜಯ ಜಿನಗಾ, ಕೆ.ಸಿ. ಕೊಂಡಯ್ಯ, ಜಿ.ಎಸ್. ಪಾಟೀಲ, ಎಂ.ಕೆ. ಪಟ್ಟಣಶೆಟ್ಟಿ, ಸಾಲಿ ಸಿದ್ಧಯ್ಯ ಮತ್ತಿತರರು ಹಾಜರಿದ್ದರು.