ಹೊಸಪೇಟೆ: ಇತಿಹಾಸ ಪ್ರಸಿದ್ಧ ಹಂಪಿಯ ವಿರೂಪಾಕ್ಷೇಶ್ವರ ತೆಪ್ಪೋತ್ಸವ ದೇವಸ್ಥಾನದ ಬಲ ಭಾಗದಲ್ಲಿರುವ ಮನ್ಮಥ ಪುಷ್ಕರಣಿಯಲ್ಲಿ ಮಂಗಳವಾರ ರಾತ್ರಿ ಸಂಭ್ರಮದಿಂದ ಜರುಗಿತು.
ವಿರೂಪಾಕ್ಷೇಶ್ವರ ಸ್ವಾಮಿಯ ‘ಪೂಜಾಫಲ’ ಪ್ರಯುಕ್ತ ಕಾರ್ತೀಕೋತ್ಸವ ಸಮಯದಲ್ಲಿ ನಡೆಯುವ ಈ ತೆಪ್ಪೋತ್ಸವ ಮಂಗಳವಾರ ರಾತ್ರಿ 9 ಗಂಟೆಗೆ ಆರಂಭವಾಯಿತು. ವಿರೂಪಾಕ್ಷೇಶ್ವರನನ್ನು ಹೊತ್ತ ತೆಪ್ಪ ಪುಷ್ಕರಣಿಯಲ್ಲಿ ಐದು ಸುತ್ತು ಪ್ರದಕ್ಷಿಣೆ ಹಾಕಿತು. ಇದಕ್ಕೂ ಮೊದಲು ‘ಸಂಕಲ್ಪ’ ಕಾರ್ಯಕ್ರಮ ನಡೆಯಿತು.
ವಿಜಯನಗರದ ಅರಸ ಶ್ರೀಕೃಷ್ಣದೇವರಾಯ ತನ್ನ ಪಟ್ಟಾಭಿಷೇಕದ ಸಂದರ್ಭದಲ್ಲಿ ವಿರೂಪಾಕ್ಷೇಶ್ವರ ದೇವರಿಗೆ ಅರ್ಪಿಸಿದ ನವರತ್ನ ಖಚಿತ ಸುವರ್ಣಮುಖ ಕಮಲದೊಂದಿಗೆ ವಿರೂಪಾಕ್ಷೇಶ್ವರ ದೇವರನ್ನು ಅಲಂಕರಿಸಲಾಗಿತ್ತು.
ತೆಪ್ಪೋತ್ಸವದ ಸಂದರ್ಭದಲ್ಲಿ ಪಂಡಿತ–ಪುರೋಹಿತರು ಮಂತ್ರ ಘೋಷಗಳನ್ನು ಹೇಳಿದರೆ, ಪಾಲ್ಗೊಂಡಿದ್ದ ಸಾವಿರಾರು ಭಕ್ತರು ಪುರದೊಡೆಯನಿಗೆ ಭಕ್ತಿಯಿಂದ ನಮಿಸಿ ಜೈಕಾರ ಹಾಕಿದರು. ಅಲ್ಲದೆ ದೇವರಿಗೆ ಫಲಪುಷ್ಪ ಅರ್ಪಿಸಿದರು.
ಗುರುವಾರ ವಿರೂಪಾಕ್ಷೇಶ್ವರನಿಗೆ ನಿಶ್ಚಿತಾರ್ಥದ ಫಲಪೂಜಾ ಕಾರ್ಯಕ್ರಮ ನಡೆಯಲಿದೆ.
‘ಪ್ರತಿ ವರ್ಷ ವಿರೂಪಾಕ್ಷೇಶ್ವರ ದೇವರ ತೆಪ್ಪೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪೂಜಾಫಲ ನಿಮಿತ್ತ ಆಚರಿಸಲಾಗುವ ಈ ತೆಪ್ಪೋತ್ಸವದ ಸಂದರ್ಭದಲ್ಲಿ ದೇವರಿಗೆ ಸಂಕಲ್ಪ ಮಾಡಿಕೊಳ್ಳಲಾಗುವುದು. ಗುರುವಾರ ವಿರೂಪಾಕ್ಷೇಶ್ವರ ದೇವರ ನಿಶ್ಚಿತಾರ್ಥ ಕಾರ್ಯಕ್ರಮ ಜರುಗಲಿದೆ’ ಎಂದು ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಅರ್ಚಕ ಮೋಹನ ಚಿಕ್ಕಭಟ್ ಜೋಶಿ ಪ್ರಜಾವಾಣಿಗೆ ತಿಳಿಸಿದರು.