ಹೊಸಪೇಟೆ: `ಈ ದೇಶದ ರಾಜಕೀಯ ಭವಿಷ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸುವ ನಾವು ನಮ್ಮ ನೋವು- ನಲಿವಿನ ಜೊತೆ ಬಡತನದ ಹಕ್ಕು ಮತ್ತು ಸೌಲಭ್ಯಗಳ ಬಗ್ಗೆ ಜಾಗೃತಿ ವಹಿಸಬೇಕಾಗಿದೆ' ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಮೊಗಳ್ಳಿ ಗಣೇಶ ಹೇಳಿದರು.
ಸ್ಲಂ ಜನಾಂದೋಲನಾ ಕರ್ನಾಟಕ ಹಾಗೂ ಹೊಸಪೇಟೆ ಸ್ಲಂ ಜನ ಜಾಗೃತಿ ಆಂದೋಲನಾ ಸಮಿತಿ ಭಾನುವಾರ ಜಂಟಿಯಾಗಿ `ಸ್ಲಂ ಜನಶಕ್ತಿ ರಾಜ್ಯ ಜಾಥಾ'ದ ಅಂಗವಾಗಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಅಧಿಕಾರ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬೇಕಾಗಿದೆ. ಹಾಗೆಯೇ ನಮ್ಮ ಜನಗಳು ಜಾಗೃತರಾಗಲಿ' ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಆರಂಭವಾದ ರ್ಯಾಲಿ ನಗರದ ಪ್ರಮುಖ ರಸ್ತೆಗಳ ಮೂಲಕ ತೆರಳಿ ಟೌನ್ ರೀಡಿಂಗ್ ರೂಮ್ನಲ್ಲಿ ಅಂತ್ಯಗೊಂಡಿತು.
ಸಂಘಟನಾ ಸಂಚಾಲಕರಾದ ರಾಮಚಂದ್ರ ಮಾತನಾಡಿ ಸ್ಲಂ ಜನರು ದಿನನಿತ್ಯ ಸ್ಥಳೀಯ ಸಂಸ್ಥೆಗಳ ಮುಂದೆ ತಮ್ಮ ಸೌಲಭ್ಯಗಳಿಗಾಗಿ ಹೊರಾಡುತ್ತಿ ರುವುದನ್ನು ನಾವು ಕಾಣುತ್ತಿದ್ದೇವೆ, ಸಾಕಷ್ಟು ಸಮಸ್ಯೆಗಳಿದ್ದರೂ ಯಾರೂ ಸಹ ಈಡೇರಿಸಲು ಮುಂದಾಗದೇ ಬರೀ ಚುನಾವಣೆಗೆ ಮಾತ್ರ ನಮ್ಮ ಬಳಿ ಬರುತ್ತಾರೆ. ಇಂತಹ ರಾಜಕೀಯ ಪಕ್ಷದವರನ್ನು ನಾವು ಪ್ರಶ್ನೆ ಮಾಡಬೇಕಿದೆ. ಇದಕ್ಕಾಗಿ ನಾವು ಜಾಗೃತರಾಗ ಬೇಕಾಗಿರುವುದು ಅಗತ್ಯ ಎಂದರು.
ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕ ಐಸಾಕ್ ಅರುಳ್ ಸೆಲ್ವಾ, ರಾಜ್ಯ ಸಂಚಾಲಕ ಎ.ನರಸಿಂಹ ಮೂರ್ತಿ ಮತ್ತು ಸಮಿತಿಯ ಅಧ್ಯಕ್ಷ ಎಚ್.ಶೇಷು ಮಾತನಾಡಿದರು.ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ನಿರೂಪಿಸಿದ್ದ ಕಾರ್ಯಕ್ರಮಕ್ಕೆ, ಯುವ ಘಟಕದ ಪರಶಪ್ಪ ಸ್ವಾಗತಿಸಿದರು.
ಡಿಂಗ್ರಿ ನರಸಪ್ಪ ನೇತೃತ್ವದ ಕಲಾ ತಂಡಗಳು ಕ್ರಾಂತಿಗೀತೆಗಳ ಮೂಲಕ ಕೊಳೆಗೇರಿ ಜನರಿಗೆ ಉತ್ಸಾಹವನ್ನು ತುಂಬಿದರು.ಮಹಿಳಾ ಘಟಕದ ಹುಲಿಗೆಮ್ಮ, ವೆಂಕಟೇಶಲು, ಮಂಜುಳಾ ಮಾಳಗಿ, ಸುನಿಲ್ ಹಾಗು ಪೀರ್ಸಾಬ್, ರೋಫ್ಸಾಬ್, ಮಹಿಳಾ ಘಟಕದ ಅಧ್ಯಕ್ಷೆ ಮೆಹಬುನ್ನಿಸಾ ಪಾಲ್ಗೊಂಡಿದ್ದರು.