ಕೆಂಗೇರಿ: `ಹಳ್ಳಿಕಾರ ಜನಾಂಗ ತ್ಯಾಗದ ಗುಣಗಳನ್ನು ಮೈಗೂಡಿಸಿಕೊಂಡು ತಾಳ್ಮೆ, ಸಹನೆಯಿಂದ ಸಮಾಜದಲ್ಲಿ ಗುರುತಿಸಿಕೊಂಡಿದೆ' ಎಂದು ಮಾಜಿ ಸಚಿವ ವಿ.ಸೋಮಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.
ಹಳ್ಳಿಕಾರರ ಯುವ ವೇದಿಕೆ ವತಿಯಿಂದ ದಾಸರಹಳ್ಳಿಯ ಮುಖ್ಯ ರಸ್ತೆಯ ಎಚ್.ವಿ.ಆರ್.ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
`ಯುವಕರು ತಮ್ಮ ಹಕ್ಕುಗಳಿಗೆ ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆಯಬೇಕು. ಹಳ್ಳಿಗಳಿಗೆ ಸವಲತ್ತುಗಳನ್ನು ತಲುಪಿಸಲು ಯುವಕರು ಮುಂದಾಗಬೇಕು' ಎಂದರು.
ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಮಾಜಿ ಶಾಸಕ ಹೇಮಚಂದ್ರ ಸಾಗರ್, ಮಾಜಿ ಉಪ ಮೇಯರ್ ಕೆ.ಸಿ.ಲಕ್ಷ್ಮೀದೇವಿ, ಪಾಲಿಕೆ ಸದಸ್ಯರಾದ ಮೋಹನ್ ಕುಮಾರ್, ಉಮೇಶ್ ಶೆಟ್ಟಿ, ಆರ್.ಪ್ರಕಾಶ್, ಸಂಘದ ಅಧ್ಯಕ್ಷ ಟಿ.ಶ್ರೀನಿವಾಸ್ ಮೂರ್ತಿ, ಕಾರ್ಯದರ್ಶಿ ಎಚ್.ಎಸ್.ಪುಟ್ಟೇಗೌಡ ಹಾಜರಿದ್ದರು.
ಸಮುದಾಯದ ಡಾ. ದಾಸರ ಹನುಮಕ್ಕ, ಲಕ್ಷ್ಮೀ ವಜ್ರಮುನಿ, ವಕೀಲ ಜಗನ್ನಾಥ್, ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ಪುಟ್ಟಯ್ಯ, ನಿವೃತ್ತ ಸಬ್ ರಿಜಿಸ್ಟಾರ್ ನರಸಿಂಹಯ್ಯ ಅವರಿಗೆ `ಹಳ್ಳಿಕಾರ ರತ್ನ' ಪ್ರಶಸ್ತಿ ಪ್ರದಾನ ಮಾಡಲಾಯಿತು.