ಬೆಂಗಳೂರು: ಆಶ್ರಯ ಯೋಜನೆ ಮತ್ತು ಇತರ ವಸತಿ ಯೋಜನೆಗಳ ಅಡಿ ನಿವೇಶನ ಪಡೆದುಕೊಂಡವರಿಗೆ ಹಕ್ಕುಪತ್ರ ನೀಡಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರ ರಾವ್ ಅವರು ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ ಅವರಿಗೆ ಮಂಗಳವಾರ ನಿರ್ದೇಶನ ನೀಡಿದ್ದಾರೆ.
ನಿವೇಶನ ಪಡೆದು ಮನೆ ನಿರ್ಮಿಸಿಕೊಂಡವರಿಗೆ ಹಕ್ಕುಪತ್ರ ನೀಡಬೇಕು, ನಿವೇಶನ ಮಾತ್ರ ಪಡೆದುಕೊಂಡವರಿಗೆ ಹಕ್ಕುಪತ್ರದ ದೃಢೀಕೃತ ಜೆರಾಕ್ಸ್ ಪ್ರತಿ ನೀಡಬೇಕು ಎಂದು ಲೋಕಾಯುಕ್ತರು ತಾಕೀತು ಮಾಡಿದ್ದಾರೆ.
ಆಶ್ರಯ ಯೋಜನೆಯ ಅಡಿ ನಿವೇಶನ, ಮನೆ ಪಡೆಯಲು ಲಂಚ ಕೊಡಬೇಕು ಎಂಬ ದೂರುಗಳು ಲೋಕಾಯುಕ್ತರಿಗೆ ಬಂದಿದ್ದವು. ಹೀಗಾಗಿ ಕಾರ್ಯದರ್ಶಿ ಜೊತೆ ಬೆಂಗಳೂರಿನಲ್ಲಿ ಸಮಾಲೋಚನೆ ನಡೆಸಿ, ‘ಆಶ್ರಯ ಮತ್ತು ಇತರ ಯೋಜನೆಗಳ ಅಡಿ ರಾಜ್ಯದಲ್ಲಿ ಎಷ್ಟು ನಿವೇಶನ ವಿತರಿಸಲಾಗಿದೆ? ಎಷ್ಟು ಪ್ರಕರಣಗಳಲ್ಲಿ ಹಕ್ಕುಪತ್ರ ನೀಡಲಾಗಿದೆ ಮತ್ತು ಎಷ್ಟು ಪ್ರಕರಣಗಳಲ್ಲಿ ಹಕ್ಕುಪತ್ರವನ್ನು ಇನ್ನೂ ನೀಡಿಲ್ಲ?’ ಎಂಬ ವಿವರಗಳನ್ನು ಜನವರಿ 17ರೊಳಗೆ ನೀಡಬೇಕು ಎಂದು ಲೋಕಾಯುಕ್ತರು ಸೂಚಿಸಿದ್ದಾರೆ.