ನವದೆಹಲಿ (ಪಿಟಿಐ): ಬರಹಗಾರರು ಮತ್ತು ಕವಿಗಳು ದೀರ್ಘ ಕಾಲದಿಂದ ಕಾಯುತ್ತಿದ್ದ ಹಕ್ಕುಸ್ವಾಮ್ಯ ಮಸೂದೆ 2010ಕ್ಕೆ ರಾಜ್ಯಸಭೆ ಗುರುವಾರ ಸಂಜೆ ಅನುಮೋದನೆ ನೀಡಿದೆ.
ಬರಹಗಾರರು ಹಾಗೂ ಗೀತ ರಚನೆಕಾರರಿಗೆ ರಾಯಧನ ನೀಡದೆ ಅವರ ಹಾಡುಗಳು, ಬರಹಗಳನ್ನು ಸಂಗೀತ ಕಂಪೆನಿಗಳು ಹಾಗೂ ಸಿನಿಮಾ ನಿರ್ಮಾಪಕರು ಬಳಸುವುದನ್ನು ಈ ಮಸೂದೆ ತಡೆಯಲಿದೆ.
ಕೀಟನಾಶಕ ತಡೆ: ಕೃಷಿ ಹಾಗೂ ಪ್ರಾಣಿಜನ್ಯ ಉತ್ಪನ್ನಗಳ ಆಮದು ಸೇರಿದಂತೆ ವಿದೇಶಿ ಕೀಟನಾಶಕಗಳ ಪ್ರಮಾಣ ತಡೆಗಟ್ಟಲು ರಾಷ್ಟ್ರೀಯ ಕೃಷಿ ಜೀವ ವೈವಿಧ್ಯ ಸಂಸ್ಥೆ ಸ್ಥಾಪನೆ ಕುರಿತ ಮಸೂದೆಗೂ ಸಂಪುಟ ಅನುಮತಿ ನೀಡಿದೆ.
ಕೃಷಿ, ಪ್ರಾಣಿಜನ್ಯ ಉತ್ಪನ್ನಗಳ ಆಮದಿಗೆ ಕಠಿಣ ನಿಯಮಗಳನ್ನು ಜಾರಿಗೊಳಿಸುವ ಮೂಲಕ ಜೀವವೈವಿಧ್ಯ ಕಾಪಾಡುವಲ್ಲಿ ಈ ಹೊಸ ಮಸೂದೆಯಲ್ಲಿ ಅವಕಾಶಗಳಿವೆ ಎಂದು ಮೂಲಗಳು ತಿಳಿಸಿವೆ.
ಅನಿಲ ಖರೀದಿಗೆ ಒಪ್ಪಿಗೆ: ತುರ್ಕ್ಮೇನಿಸ್ತಾನದಿಂದ ಆಫ್ಘಾನಿಸ್ತಾನ- ಪಾಕಿಸ್ತಾನ ಮಾರ್ಗವಾಗಿ ನೈಸರ್ಗಿಕ ಅನಿಲ ಖರೀದಿಸುವ ಒಪ್ಪಂದಕ್ಕೆ ಭಾರತ ಮುಂದಿನ ವಾರ ಸಹಿ ಹಾಕಲಿದೆ. ಇದಕ್ಕೆ ಸಂಪುಟ ಸಮ್ಮತಿ ನೀಡಿದೆ.
ಲೋಕಪಾಲ ಚರ್ಚೆ: ಬಹು ಚರ್ಚಿತ ಲೋಕಪಾಲ ಮಸೂದೆಯು ಸೋಮವಾರ ಅಥವಾ ಮಂಗಳವಾರ ರಾಜ್ಯಸಭೆಯಲ್ಲಿ ಚರ್ಚೆಗೆ ಬರಲಿದೆ. ಲೋಕಾಯುಕ್ತರ ನೇಮಕ, ಸಿಬಿಐ ಮುಖ್ಯಸ್ಥರ ನೇಮಕಾತಿಯಲ್ಲಿ ಪಾರದರ್ಶಕತೆ ಕಾಪಾಡುವಂತಹ ವಿವಾದಾತ್ಮಕ ವಿಷಯಗಳಲ್ಲಿ ಒಮ್ಮತಾಭಿಪ್ರಾಯ ಮೂಡಿಸಲು ಸರ್ಕಾರ ವಿರೋಧ ಪಕ್ಷಗಳೊಂದಿಗೆ ಈಗಾಗಲೇ ಮಾತುಕತೆ ನಡೆಸಿದೆ.