ಗುಲ್ಬರ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಥಾಪಿಸಿದ ಹೊಸ ಪಕ್ಷಕ್ಕೆ ಚಿಹ್ನೆ, ನೀತಿ, ಸಿದ್ಧಾಂತಗಳೇ ಇಲ್ಲದಿರುವುದರಿಂದ ಅದನ್ನು ಒಂದು ರಾಜಕೀಯ ಪಕ್ಷ ಎಂದು ಹೇಳಲಾಗುವುದಿಲ್ಲ. ಹಗರಣಗಳನ್ನು ಮುಚ್ಚಿಹಾಕಲು ರಾಜಕೀಯ ಬಣ್ಣ ಬಳಿಯುವ ಕೆಲಸ ಸದ್ಯ ನಡೆದಿದೆ ಎಂದು ನರ್ಮದಾ ಬಚಾವೋ ಆಂದೋಲನದ ರೂವಾರಿ ಮೇಧಾ ಪಾಟ್ಕರ್ ಭಾನುವಾರ ಇಲ್ಲಿ ಹೇಳಿದರು.
ಸ್ಲಂ ಜನಾಂದೋಲನ ರಾಜ್ಯ ಘಟಕವು ಹಮ್ಮಿಕೊಂಡಿರುವ `ಸ್ಲಂ ನಿವಾಸಿಗಳ ಜನಶಕ್ತಿ' ರಾಜ್ಯ ಮಟ್ಟದ ಜಾಥಾಕ್ಕೆ ಚಾಲನೆ ನೀಡಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜಕೀಯ ನಾಯಕರು ಜನರನ್ನು ಜೀತದಾಳುಗಳಂತೆ ಕಾಣುತ್ತಿದ್ದಾರೆ. ಕೊಳಚೆ ಪ್ರದೇಶದ ನಿವಾಸಿಗಳಿಗೆ ನಿವೇಶನ ನೀಡಲು ಸಚಿವರು, ಶಾಸಕರು ಕಬಳಿಸಿದ ಭೂಮಿಯನ್ನು ಹಿಂದಕ್ಕೆ ಪಡೆದುಕೊಂಡರೆ ಸಾಕಾಗುತ್ತದೆ ಎಂದರು. ಅಭಿವೃದ್ಧಿಗೆ ಸಂಬಂಧಿಸಿದಂತೆ ನಗರಗಳಲ್ಲೇ ಸಾಕಷ್ಟು ಅಸಮತೋಲನ ಇದೆ. ಕೊಳೆಗೇರಿ ನಿವಾಸಿಗಳ ಬಗ್ಗೆ ಸರ್ಕಾರಗಳು ನಿರ್ಲಕ್ಷ್ಯ ಮನೋಭಾವ ತಾಳಿವೆ ಎಂದು ಅವರು ಹೇಳಿದರು.
ದೇಶದಲ್ಲಿ ಶೇ 96ರಷ್ಟು ಜನರು ಸಾಮಾಜಿಕ ಸುರಕ್ಷತೆ ಇಲ್ಲದೆ ಬದುಕುತ್ತಿದ್ದಾರೆ. ಕರ್ನಾಟಕದಲ್ಲಿ ಶೇ 45ರಷ್ಟು ಜನರು ಕೊಳಚೆ ಪ್ರದೇಶಗಳಲ್ಲಿ ಜೀವಿಸುತ್ತಿದ್ದು, ಸುಮಾರು 5 ಸಾವಿರ ಕೊಳೆಗೇರಿಗಳಿವೆ. ಆದರೆ ರಾಜ್ಯ ಸರ್ಕಾರ 272 ಕೊಳಚೆ ಪ್ರದೇಶಗಳನ್ನು ಮಾತ್ರ ಗುರುತಿಸಿದೆ. ಇವುಗಳ ಅಭಿವೃದ್ಧಿಗೆ 75 ಕೋಟಿ ರೂಪಾಯಿ ತೆಗೆದಿಟ್ಟಿದೆ. ಆದರೆ ನಗರಾಭಿವೃದ್ಧಿ ಯೋಜನೆಗಳಿಗೆ 75 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ ಎಂದರು.