ಚೆನ್ನೈ(ಪಿಟಿಐ): 2ಜಿ ಸ್ಪೆಕ್ಟ್ರಂ ಹಗರಣದ ಹಿನ್ನೆಲೆಯಲ್ಲಿ ಸಿಬಿಐ ಬುಧವಾರ ದಾಳಿ ಮಾಡಿದ್ದ ಇಲ್ಲಿನ ಸರ್ಕಾರೇತರ ಸಂಸ್ಥೆ ‘ತಮಿಳ್ ಮೈಯಾಮ್’ ಸಂಸ್ಥೆಯ ಸಂಸ್ಥಾಪಕ ಜಗತ್ ಗಾಸ್ಪರ್ ತಮಗೂ 2ಜಿ ಸ್ಪೆಕ್ಟ್ರಂ ಹಗರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಎಂ.ಕರುಣಾನಿಧಿ ಪುತ್ರಿ ಹಾಗೂ ಸಂಸದೆ ಕನಿಮೊಳಿ ತಮ್ಮ ಸಂಸ್ಥೆಯ ಟ್ರಸ್ಟಿಯಾಗಿದ್ದಾರೆ ಎನ್ನುವುದು ಸತ್ಯ ಎಂದೂ ಅವರು ಹೇಳಿದ್ದಾರೆ.
‘ನಮ್ಮ ಸಂಸ್ಥೆ ಹಾಗೂ 2ಜಿ ಸ್ಪೆಕ್ಟ್ರಂ ಹಗರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದಿರುವ ಅವರು, ನಮ್ಮ ಚಟುವಟಿಕೆಗಳು ಪೂರ್ಣ ಪಾರದರ್ಶಕವಾಗಿವೆ. ಹಾಗಾಗಿ ನಾವು ಯಾರಿಗೂ ಹೆದರಿಕೊಳ್ಳುವ ಅಗತ್ಯ ಇಲ್ಲ’ ಎಂದರು. ‘ನಾವು ರಾಜಕೀಯ ಮುಖಂಡರೊಂದಿಗೆ ಸೇರಿಕೊಂಡು ಚಟುವಟಿಕೆ ನಡೆಸುತ್ತಿದ್ದು, ಯಾರೂ ಅದನ್ನು ತಡೆಯಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಎಐಎಡಿಎಂಕೆ ಅಧಿಕಾರಕ್ಕೆ ಬಂದರೆ ಅವರೊಂದಿಗೂ ಸೇರಿಕೊಂಡು ಕೆಲಸ ಮಾಡುತ್ತೇವೆ’ ಎಂದು ಗಾಸ್ಪರ್ ಹೇಳಿದ್ದಾರೆ.