ನವದೆಹಲಿ (ಐಎಎನ್ಎಸ್): `ವೋಟಿಗಾಗಿ ನೋಟು~ ಹಗರಣದ ಹಿಂದೆ ಇರುವ ವ್ಯಕ್ತಿಗಳ ಹೆಸರನ್ನು ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಸಮಾಜವಾದಿ ಪಕ್ಷದ ಮಾಜಿ ಮುಖಂಡ, ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ಅವರು ಬಹಿರಂಗಪಡಿಸಬೇಕು ಎಂದು ಬಿಜೆಪಿ ಹೇಳಿದೆ.
`ಈ ಹಗರಣದಲ್ಲಿ ಯಾರ ಹೆಸರು ಬಂದರೂ, ಹಗರಣದ ಪ್ರಯೋಜನ ಪಡೆದಿರುವುದು ಯುಪಿಎ ಸರ್ಕಾರ~ ಎಂದು ಬಿಜೆಪಿ ಮುಖಂಡ ರಾಜೀವ್ ಪ್ರತಾಪ್ ರೂಡಿ ಸುದ್ದಿಗಾರರಿಗೆ ತಿಳಿಸಿದರು.
`ಹಗರಣದಿಂದ ಪ್ರಯೋಜನ ಪಡೆದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಹೇಗೆ? ಈ ಹಗರಣದ ಸಂಬಂಧ ಸ್ಪಷ್ಟನೆ ನೀಡಲು ಮತ್ತು ರೂವಾರಿಗಳ ಹೆಸರನ್ನು ಬಹಿರಂಗ ಪಡಿಸಲು ಅಮರ್ ಸಿಂಗ್ ಅವರಿಗೆ ಇದು ಸೂಕ್ತ ಸಮಯ~ ಎಂದು ರೂಡಿ ಹೇಳಿದರು.
ಲೋಕಸಭೆಯಲ್ಲಿ 2008ರಲ್ಲಿ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ನಡೆದಿದ್ದ `ಓಟಿಗಾಗಿ ನೋಟು~ ಹಗರಣದ ಲ್ಲಿ ಭಾಗಿಯಾದ ಆರೋಪದಲ್ಲಿ ಅಮರ್ ಸಿಂಗ್ ಮತ್ತು ಇಬ್ಬರು ಬಿಜೆಪಿ ಸಂಸತ್ ಸದಸ್ಯರನ್ನು ಮಂಗಳವಾರ ಬಂಧಿಸಲಾಗಿದ್ದು, ಅವರನ್ನು 14 ದಿನಗಳ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಈ ಮಧ್ಯೆ, ಹಗರಣದಲ್ಲಿ ಬಳಕೆಯಾದ ಹಣದ ಮೂಲ ವಿಚಾರ ಅತ್ಯಂತ ಪ್ರಮುಖವಾದುದು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.
`ಅಷ್ಟೊಂದು ಹಣ ಎಲ್ಲಿಂದ ಬಂತು, ಯಾರು ಕೊಟ್ಟರು ಎಂಬ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿಲ್ಲ. ಇವುಗಳು ಅತ್ಯಂತ ಪ್ರಮುಖ ವಿಚಾರವಾಗಿದ್ದು, ಸಿಬಿಐ ಈ ಬಗ್ಗೆ ಗಮನ ಹರಿಸಬೇಕು~ ಎಂದು ಪ್ರಸಾದ್ ಹೇಳಿದ್ದಾರೆ.