ಚಿತ್ರದುರ್ಗ: ಸರ್ಕಾರಿ ಖಜಾನೆಯನ್ನು ಹಗಲು ದರೋಡೆ ಮಾಡಿದವರು ಬಿಜೆಪಿ ಸರ್ಕಾರದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಿಡಿಕಾರಿದರು.
ಹಿರಿಯೂರು ತಾಲ್ಲೂಕಿನ ಧರ್ಮಪುರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಇತ್ತೀಚೆಗೆ ರಾಜಕೀಯ ಹೊಲಸಾಗಿದೆ. ಗೌರವಸ್ಥರು ರಾಜಕೀಯದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎನ್ನುವ ವಾತಾವರಣ ಸೃಷ್ಟಿಯಾಗಿದೆ. ಭ್ರಷ್ಟಾಚಾರ ಮಾಡಿರುವವರೇ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಕಾಂಗ್ರೆಸ್ ಅಧಿವೇಶನದಲ್ಲಿ ಕರ್ನಾಟಕದಲ್ಲಿನ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಹೊಗಳುಭಟ್ಟರ ಮಾತು ಕೇಳಿ ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿರುವ ಸೋನಿಯಾಗಾಂಧಿ ಅವರು ಒಂದು ರಾಜ್ಯ ಸರ್ಕಾರದ ಬಗ್ಗೆ ಮಾತನಾಡುವಷ್ಟು ಕೀಳುಮಟ್ಟಕ್ಕೆ ಇಳಿಯಬಾರದಿತ್ತು.
ಸೋನಿಯಾಗಾಂಧಿ ಅವರು ಮೊದಲು ಎಸ್.ಎಂ. ಕೃಷ್ಣ, ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಕಾಲದಲ್ಲಿ ಸಾವಿರಾರು ಎಕರೆ ಕಬಳಿಸಿರುವ ಪ್ರಕರಣಗಳ ಬಗ್ಗೆ ಯೋಚಿಸಲಿ ಎಂದು ನುಡಿದರು.
ಕೇಂದ್ರದ ಯುಪಿಎ ಸರ್ಕಾರದ ಆಡಳಿತದಲ್ಲಿ ಲಕ್ಷಾಂತರ ಕೋಟಿ ರೂ ಹಗರಣ ನಡೆದಿರುವಾಗ ರಾಜ್ಯ ಸರ್ಕಾರದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು.
ಪಂಚಾಯ್ತಿ ಚುನಾವಣೆಗಳು ಬಂದಿವೆ ಎಂದು ವಿದ್ಯುತ್ ಪೂರೈಸಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಆದರೆ, ಭಗವಂತನ ದಯೆಯಿಂದ ಜಲಾಶಯ ತುಂಬಿ ತುಳುಕುತ್ತಿವೆ. ಪ್ರತಿದಿನ 1 ಸಾವಿರ ಮೆಗಾವ್ಯಾಟ್ ವಿದ್ಯುತ್ ಖರೀದಿಸಲಾಗುತ್ತಿದೆ. ಬೇಸಿಗೆಯಲ್ಲೂ ಈ ಬಾರಿ ಸಮರ್ಪಕವಾಗಿ ವಿದ್ಯುತ್ ಪೂರೈಸುತ್ತೇವೆ ಎಂದು ಭರವಸೆ ನೀಡಿದರು.
ನಂತರ ಮಸ್ಕಲ್ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ, ಬೆಂಗಳೂರಿನಲ್ಲಿ ಕುಳಿತು ರಾಜಕೀಯ ದೊಂಬರಾಟ ಮಾಡುವವರಿಗೆ ಪಾಠ ಕಲಿಸುವುದು ಯಾವಾಗ ಎಂದು ಮತದಾರರನ್ನು ಪ್ರಶ್ನಿಸಿದರು.
ಸಂಸದ ಜನಾರ್ದನಸ್ವಾಮಿ, ವಿಧಾನಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ, ಶಾಸಕ ತಿಪ್ಪೇಸ್ವಾಮಿ, ಬಿಜೆಪಿ ಮುಖಂಡ ಲಕ್ಷ್ಮೀಕಾಂತ್ ಮತ್ತಿತರರು ಹಾಜರಿದ್ದರು.ಗಿ ನಿಂತು ರಾಜಕೀಯ ದೊಂಬರಾಟ ಮಾಡುವವರನ್ನು ಆಯ್ಕೆ ಮಾಡಬೇಡಿ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಅಥವಾ ಬಿಜೆಪಿಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳಿ. ಇವುಗಳ ಮಧ್ಯದಲ್ಲಿರುವವರು ಗಟ್ಟಿಯಾಗಿ ನಿಲ್ಲುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಪಂಚಾಯ್ತಿ ಚುನಾವಣೆ ನಂತರ ಯೋಗ್ಯರನ್ನು ಗುರುತಿಸಿ ಮುಂದಿನ ಚುನಾವಣೆಯಲ್ಲಿ ವಿಧಾನಸೌಧಕ್ಕೆ ಮುತ್ತಿನಂತಹ 150 ಶಾಸಕರನ್ನು ಆಯ್ಕೆ ಮಾಡಿಸುವುದು ನನ್ನ ಗುರಿಯಾಗಲಿದೆ ಎಂದು ಘೋಷಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.