ನವದೆಹಲಿ (ಪಿಟಿಐ): ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ~ತಮ್ಮ ಚಿಂತನೆಯ ಲೋಕಪಾಲ ಮಸೂದೆಯನ್ನು ಹೇರಲು ಯತ್ನಿಸುತ್ತಿದ್ದಾರೆ. ಅವರ ~ಸಂಪೂರ್ಣ ತಪ್ಪು ಕಲ್ಪನೆ~ಯ ದಾರಿ ಎಡರುತೊಡರುಗಳಿಂದ ಕೂಡಿದ್ದು ಸಂಸದೀಯ ಪ್ರಜಾಪ್ರಭುತ್ವದ ಮೇಲೆ ~ಅಪಾಯಕಾರಿ ಪರಿಣಾಮ~ಗಳನ್ನು ಉಂಟು ಮಾಡುತ್ತದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಬುಧವಾರ ಸಂಸತ್ತಿನಲ್ಲಿ ಹೇಳಿದರು.
ಅಣ್ಣಾ ಹಜಾರೆ ಅವರ ಬಂಧನದ ಬಗ್ಗೆ ತೀವ್ರ ಪ್ರತಿಭಟನೆಯ ಮಧ್ಯೆ ಉದ್ರಿಕ್ತ ವಿರೋಧಿ ಸದಸ್ಯರ ಬೇಡಿಕೆಗೆ ಮಣಿದು ಉಭಯ ಸದನಗಳಲ್ಲೂ ಒಂದೇ ರೀತಿಯ ಹೇಳಿಕೆ ನೀಡಿದ ಅವರು ಹಜಾರೆ ಬಂಧನಕ್ಕೆ ಸಂಬಂಧಿಸಿದ ಘಟನಾವಳಿಗಳ ಬಗ್ಗೆ ಸಂಸತ್ತಿಗೆ ವರದಿ ಮಾಡುವ ~ನೋವಿನ ಕರ್ತವ್ಯ~ ನಿಭಾಯಿಸುತ್ತಿದ್ದೇನೆ ಎಂದು ಹೇಳಿದರು.
ಸೂಕ್ತ ಷರತ್ತಿನ ಮೇಲೆ ಶಾಂತಿಯುತ ಪ್ರತಿಭಟನೆ ನಡೆಸುವ ನಾಗರಿಕರ ಹಕ್ಕನ್ನು ಸರ್ಕಾರ ಮನ್ನಿಸುವುದಾದರೂ ~ಸಾಮಾಜಿಕ ಕಾರ್ಯಕರ್ತ ಮತ್ತು ಅವರು ಆರು ಮಂದಿ ಸಹವರ್ತಿಗಳನ್ನು ಶಾಂತಿಭಂಗವಾಗಬಹುದೆಂಬ ಕಾರಣಕ್ಕಾಗಿ ಬಂಧಿಸಲಾಯಿತು ಎಂದು ನುಡಿದರು.
ಒತ್ತಡಕ್ಕೆ ಮಣಿದು ಪ್ರಧಾನಿ ನೀಡಿದ ಪೊಲೀಸ್ ಕ್ರಮದ ಸಮರ್ಥನೆಯ ಈ ಹೇಳಿಕೆಯನ್ನು ತಿರಸ್ಕರಿಸಿದ ವಿರೋಧಿ ಸದಸ್ಯರು ~ಸರ್ಕಾರ ಬ್ರಿಟಿಷ್ ಆಡಳಿತಗಾರರು ಅನುಸರಿಸುತ್ತಿದ್ದ ದಮನ ನೀತಿಯನ್ನೇ ಅನುಸರಿಸುತ್ತಿದೆ~ ಎಂದು ಆಪಾದಿಸಿದರು.
ಸರ್ಕಾರ ಯಾವುದೇ ವರ್ಗದ ಜೊತೆಗೂ ಸಂಘರ್ಷ ಬಯಸುತ್ತಿಲ್ಲ ಎಂದು ಈ ಸಂದರ್ಭದಲ್ಲಿ ಪ್ರಧಾನಿ ಪ್ರತಿಪಾದಿಸಿದರು.
ಆದರೆ ಕೆಲವು ವರ್ಗಗಳು ಉದ್ದೇಶಪೂರ್ವಕವಾಗಿ ಸರ್ಕಾರದ ಅಧಿಕಾರ ಮತ್ತು ಮತ್ತು ಸಂಸತ್ತಿನ ವಿಶೇಷಾಧಿಕಾರಕ್ಕೆ ಸವಾಲು ಎಸೆದಾಗ ಶಾಂತಿ, ಸುವ್ಯವಸ್ಥೆ ಪಾಲನೆಯಾಗುವಂತೆ ನೋಡಿಕೊಳ್ಳುವುದು ಸರ್ಕಾರದ ಆದ್ಯ ಕರ್ತವ್ಯವಾಗುತ್ತದೆ ಎಂದು ಪ್ರಧಾನಿ ಹೇಳಿದರು.
ಹಜಾರೆಯವರು ಬಲಾಢ್ಯ ಹಾಗೂ ಪರಿಣಾಮಕಾರಿ ಲೋಕಪಾಲ ವ್ಯವಸ್ಥೆ ನಿರ್ಮಿಸುವ ಬಗೆಗಿನ ಉನ್ನತ ಮೌಲ್ಯಗಳಿಂದ ಸ್ಫೂರ್ತಿ ಪಡೆದಿರಬಹುದು. ಆದರೆ ಅವರು ಸಂಸತ್ತಿನ ಮೇಲೆ ತಮ್ಮ ಚಿಂತನೆಯ ಲೋಕಪಾಲ ಮಸೂದೆಯ ಕರಡನ್ನು ಹೇರಲು ಹೊರಟಿರುವುದು ಸಂಪೂರ್ಣ ತಪ್ಪು ಕಲ್ಪನೆಯ ಎಡರುತೊಡರುಗಳಿಂದ ಕೂಡಿದ ದಾರಿಯಾಗಿದ್ದು, ಸಂಸದೀಯ ಪ್ರಜಾಪ್ರಭುತ್ವದ ಮೇಲೆ ಅಪಾಯಕಾರಿ ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದು ಅವರು ಪ್ರತಿಪಾದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.