ತರೀಕೆರೆ: ಭ್ರಷ್ಟಾಚಾರದ ಬಗ್ಗೆ ಇಂದು ಮಾತನಾಡುವುದು ಅಪಹಾಸ್ಯದ ವಿಷಯವಾಗಿದೆ ಎಂದು ರಾಜ್ಯ ವಕೀಲರ ಪರಿಷತ್ ಸದಸ್ಯ ಎಚ್.ಕಾಂತರಾಜ ವಿಷಾದಿಸಿದರು.
ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿರುವ ಅಣ್ಣ ಹಜಾರೆ ಅವರನ್ನು ಬೆಂಬಲಿಸಿ ಇಲ್ಲಿನ ವಕೀಲರ ಸಂಘ ನ್ಯಾಯಾಲಯದ ಕಲಾಪವನ್ನು ಬಹಿಷ್ಕರಿಸಿ ಶುಕ್ರವಾರ ಹಮ್ಮಿಕೊಂಡಿದ್ದ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಸಮಾಜದ ಎಲ್ಲಾ ಕ್ಷೇತ್ರಗಳು ಭ್ರಷ್ಟಾಚಾರದ ಅಪಾಯಕಾರಿ ಹಂತವನ್ನು ತಲುಪಿವೆ. ಅಣ್ಣಾ ಹಜಾರೆ ಎತ್ತಿರುವ ಧ್ವನಿ ನಮ್ಮನ್ನು ನಾವು ತಿದ್ದಿಕೊಳ್ಳುವ ಎಚ್ಚರಿಕೆ ಸಂದೇಶವಾಗಿದೆ. ಭ್ರಷ್ಟಾಚಾರ ಸಮಾಜದ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರ ವಿರುದ್ಧ ದನಿ ಎತ್ತುವುದು ವಕೀಲರ ಕರ್ತವ್ಯವಾಗಬೇಕು ಎಂದು ಹೇಳಿದರು.
ಮಿತಿ ಮೀರಿದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಯುವ ಸಮುದಾಯ ಮುನ್ನುಗ್ಗಬೇಕು. ಯುವ ಜನಾಂಗ ಹಾದಿತಪ್ಪುವುದನ್ನು ತಡೆಯಲು, ದೇಶಾಭಿಮಾನ ಮೂಡಿಸಲು ಮುಂದಾಗಬೇಕಿದೆ ಎಂದರು.
ವಕೀಲರ ಸಂಘದ ಸಯ್ಯದ್ ಅನ್ಸರ್ಖಲೀಂ ಮಾತನಾಡಿ, ದೇಶದ 200ಕ್ಕೂ ಹೆಚ್ಚು ಜಿಲ್ಲೆಗಳು ನಕ್ಸಲರ ಹಿಡಿತದಲ್ಲಿವೆ. ಇದಕ್ಕೆ ಅತಿಯಾದ ಭ್ರಷ್ಟಾಚಾರ ಕಾರಣವಾಗಿದೆ ಎಂದರು.
ಪ್ರತಿಭಟನಾಕಾರರು ಮಿನಿ ವಿಧಾನಸೌಧಕ್ಕೆ ತೆರಳಿ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ವಕೀಲರ ಸಂಘದ ಅಧ್ಯಕ್ಷ ಎಂ.ಕೆ. ತೇಜಮೂರ್ತಿ, ಬಿ.ವಿ.ದಿನೇಶ್, ಜಿ.ಎನ್.ಚಂದ್ರಶೇಖರ್, ಸುರೇಶ್ಚಂದ್ರ, ಜಗದೇಶ್, ನಂದೀಶ್, ಗಂಗಾಧರಪ್ಪ, ಭಾರತಿ, ಜಯಣ್ಣ ಮತ್ತು ಪ್ರಕಾಶ್ ಇದ್ದರು.