ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಜ್ ಯಾತ್ರೆ ಮತ್ತು ಸಬ್ಸಿಡಿ ಸೀರುಂಡೆ

Last Updated 11 ಮೇ 2012, 19:30 IST
ಅಕ್ಷರ ಗಾತ್ರ

ಆರ್ಥಿಕ ಉದಾರೀಕರಣದ ಯುಗ ಆರಂಭವಾದ ನಂತರದ ಕಾಲಘಟ್ಟದಲ್ಲಿ ಯಾವ ಸಬ್ಸಿಡಿಯನ್ನು ಹಿಂತೆಗೆದುಕೊಳ್ಳುವ ಪ್ರಸ್ತಾವಕ್ಕೂ ಸಿಗದೇ ಇರುವಷ್ಟು ಜನಬೆಂಬಲ ಹಜ್ ಸಬ್ಸಿಡಿ ಹಿಂತೆಗೆದುಕೊಳ್ಳಬೇಕು ಎನ್ನುವ ಸುಪ್ರೀಂ ಕೋರ್ಟ್ ತೀರ್ಪಿಗೆ ಸಿಕ್ಕಿದೆ.
 
ಬಹುತೇಕ ಎಲ್ಲಾ ಮುಸ್ಲಿಂ ಸಂಘಟನೆಗಳೂ ಈ ತೀರ್ಪನ್ನು ಸ್ವಾಗತಿಸಿವೆ. ಹಜ್ ಸಬ್ಸಿಡಿ ವ್ಯವಹಾರದ ಸುತ್ತವೇ ತಮ್ಮ ರಾಜಕಾರಣವನ್ನು ರೂಪಿಸಿಕೊಂಡ ಮುಸ್ಲಿಂ ರಾಜಕಾರಣಿಗಳೂ ಆಶ್ಚರ್ಯ ಎಂಬಂತೆ ಈ ತೀರ್ಪನ್ನು ಸ್ವಾಗತಿಸುತ್ತಿದ್ದಾರೆ. 

ಹಜ್ ಸಬ್ಸಿಡಿ ಹಿಂತೆಗೆತದ ಕುರಿತಂತೆ ಸಲ್ಮಾನ್ ಖುರ್ಷೀದ್ ಆಡಿದ ಮಾತುಗಳನ್ನು ತಾವೇ ನುಂಗಿಕೊಳ್ಳುವಂಥ ಪರಿಸ್ಥಿತಿಯನ್ನು ಕಾಂಗ್ರೆಸ್ ಸೃಷ್ಟಿಸಿತ್ತು ಎಂಬುದೂ ಕೂಡಾ ಇಲ್ಲಿ ನೆನಪಿಸಿಕೊಳ್ಳಬೇಕಾದ ವಿಚಾರ.

ಹೀಗಿದ್ದರೂ ಕಳೆದ ನಾಲ್ಕು ದಶಕಗಳಿಂದ ಈ ಸಬ್ಸಿಡಿಯನ್ನು ಹಿಂತೆಗೆದುಕೊಳ್ಳಲು ಯಾವ ಸರ್ಕಾರವೂ ಯಾಕೆ ಮನಸ್ಸು ಮಾಡಲಿಲ್ಲ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಅಷ್ಟು ಸುಲಭವೇನೂ ಅಲ್ಲ. ಇಡೀ ಹಜ್ ಸಬ್ಸಿಡಿಯ ವ್ಯವಹಾರವೇ ಅಷ್ಟು ಸಂಕೀರ್ಣವಾದುದು.

ಸಬ್ಸಿಡಿ ಹಣವನ್ನು ಯಾವತ್ತೂ ನೇರವಾಗಿ ಯಾತ್ರಿಕರಿಗೆ ಕೊಡುತ್ತಿರಲಿಲ್ಲ. ಈ ಮೊತ್ತವನ್ನು ಹಜ್ ಯಾತ್ರಿಕರ ವಿಮಾನ ಯಾನ ವೆಚ್ಚ ದುಬಾರಿಯಾಗದಂತೆ ನೋಡಿಕೊಳ್ಳುವ ವ್ಯವಸ್ಥೆ ಎಂದು ಸರ್ಕಾರವೇ ಹೇಳಿಕೊಂಡಿತ್ತು. ವಿಮಾನ ಯಾನ ಕಂಪೆನಿಗೆ ಅಂದರೆ ಭಾರತೀಯ ಸಂದರ್ಭದಲ್ಲಿ ಏರ್ ಇಂಡಿಯಾಕ್ಕೆ ನೀಡಲಾಗುತ್ತಿತ್ತು.
 
ಕಳೆದ ಮೂರು ವರ್ಷಗಳ ಸರಾಸರಿಯನ್ನು ತೆಗೆದುಕೊಂಡರೆ ವಾರ್ಷಿಕ 1.25 ಲಕ್ಷ ಯಾತ್ರಿಕರು ಹಜ್ ಸಮಿತಿಯ ಮೂಲಕ ಯಾತ್ರೆ ನಡೆಸಿದ್ದಾರೆ. ಇವರೆಲ್ಲರ ವಿಮಾನಯಾನ ಟಿಕೇಟುಗಳನ್ನೂ ಏರ್ ಇಂಡಿಯಾ ಖರೀದಿಸಿರುವುದರಿಂದ ಸಬ್ಸಿಡಿ ರೂಪದಲ್ಲಿ ಅದಕ್ಕೆ ಸರಾಸರಿ 600 ಕೋಟಿ ರೂಪಾಯಿಗಳಷ್ಟು ದೊಡ್ಡ ಮೊತ್ತ ದೊರೆತಿದೆ.
 
ಇದರಲ್ಲಿ ಸೇವಾ ತೆರಿಗೆ ಮತ್ತು ಯಾತ್ರಿಕರು ನೀಡುವ ವಿಮಾನ ಯಾನ ಶುಲ್ಕದ ಪಾಲು ಸೇರಿಲ್ಲ. ಅದನ್ನೂ ಸೇರಿಸಿಕೊಂಡರೆ ಒಟ್ಟು ಮೊತ್ತ ಇನ್ನೂ ಹೆಚ್ಚಾಗುತ್ತದೆ.

ಪ್ರತಿ ಯಾತ್ರಿಕನೂ ಈಗ ವಿಮಾನ ಯಾನ ಶುಲ್ಕವೆಂದು 16 ಸಾವಿರ ರೂಪಾಯಿಗಳನ್ನು ಪಾವತಿಸುತ್ತಾರೆ. ಹಜ್ ದಿನಗಳಲ್ಲಿ ಏರ್ ಇಂಡಿಯಾ ಸಾಮಾನ್ಯ ಯಾತ್ರಿಕರಿಗೆ ಬೆಂಗಳೂರಿನಿಂದ ಜೆದ್ದಾಕ್ಕೆ ಹೋಗಿ ಹಿಂದಿರುಗುವ ಯಾತ್ರೆಗೆ ಸುಮಾರು 32,000 ರೂಪಾಯಿಗಳ ಶುಲ್ಕ ವಿಧಿಸುತ್ತದೆ.

ಇದೇ ಲೆಕ್ಕಾಚಾರವನ್ನು ಪರಿಗಣಿಸಿದರೂ 1.25 ಲಕ್ಷ ಯಾತ್ರಿಕರಿಗಾಗಿ ಸರ್ಕಾರ ನೀಡಬೇಕಾಗುವ ಸಬ್ಸಿಡಿಯ ಮೊತ್ತ ಸುಮಾರು 200 ಕೋಟಿ ರೂಪಾಯಿಗಳು. ಆದರೆ, ಅದರ ಮೂರು ಪಟ್ಟ ಹಣವನ್ನು ಯಾಕೆ ಸಬ್ಸಿಡಿಯಾಗಿ ನೀಡಲಾಗುತ್ತಿತ್ತು ಎಂಬ ಪ್ರಶ್ನೆಗೆ ಉತ್ತರ ದೊರೆಯುವುದಿಲ್ಲ. 

`ಹಜ್ ಯಾತ್ರಿಕರನ್ನು ಕರೆದೊಯ್ಯುವ ಮತ್ತು ಕರೆ ತರುವ ಪ್ರಕ್ರಿಯೆಯಲ್ಲಿ ಎರಡು ಖಾಲಿ ಪ್ರಯಾಣಗಳನ್ನು ನಡೆಸುವ ಅಗತ್ಯವಿರುವುದರಿಂದ ಈ ವೆಚ್ಚ ಹೆಚ್ಚಾಗುತ್ತದೆ~ ಎಂದು ಏರ್ ಇಂಡಿಯಾ ಸಮರ್ಥಿಸಿಕೊಳ್ಳುತ್ತದೆ. ಇದನ್ನು  ಒಪ್ಪಿಕೊಳ್ಳೋಣವೆಂದರೆ ಮಹಾಲೇಖಪಾಲರೇ ಈ ಉತ್ತರವನ್ನು ಒಪ್ಪಲು ಸಿದ್ಧರಿಲ್ಲ.
 
ಏಕೆಂದರೆ ಇಂಥ ಖರ್ಚುಗಳಿಗೆಂದು 2002ರಿಂದ 2006ರ ಮಧ್ಯೆ 175 ಕೋಟಿ ರೂಪಾಯಿಗಳನ್ನು ಏರ್ ಇಂಡಿಯಾ ಪಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಮಹಾಲೇಖಪಾಲರ ವರದಿ `ಈ ಖರ್ಚುಗಳಿಗೆ ಸರಿಯಾದ ಸಮರ್ಥನೆಗಳು ಏರ್ ಇಂಡಿಯಾದ ಬಳಿ ಇಲ್ಲ. ಈ ಮೊತ್ತವನ್ನು ನೀಡಿರುವ ನಾಗರಿಕ ವಿಮಾನ ಯಾನ ಸಚಿವಾಲಯ ಕೂಡಾ ಈ ವಿಷಯದಲ್ಲಿ ಸರಿಯಾದ ಸಮರ್ಥನೆಗಳನ್ನು ನೀಡಿಲ್ಲ~ ಎಂದು ಅಭಿಪ್ರಾಯ ಪಟ್ಟಿದೆ.

ಮೂರು ತಿಂಗಳಿಗೆ ಮೊದಲು ದೊಡ್ಡ ಸಂಖ್ಯೆಯ ಟಿಕೆಟ್‌ಗಳನ್ನು ಖರೀದಿಸಿದರೆ ಎಲ್ಲಾ ವಿಮಾನ ಯಾನ ಸಂಸ್ಥೆಗಳೂ ಕನಿಷ್ಠ ಸಾಮಾನ್ಯವಾಗಿ ವಿಧಿಸುವ ಶುಲ್ಕದ ಅರ್ಧದಷ್ಟು ಮೊತ್ತಕ್ಕೆ ಟಿಕೆಟ್‌ಗಳನ್ನು ಕೊಡುತ್ತವೆ. ಆದರೆ ಏರ್-ಇಂಡಿಯಾದ ವಿಷಯದಲ್ಲಿ ಇದು ಸಂಪೂರ್ಣ ಉಲ್ಟಾ.

ಸಾಮಾನ್ಯ ಸಂದರ್ಭದಲ್ಲಿ 32,000 ರೂಪಾಯಿಗಳನ್ನು ಪಡೆಯುವ ಅದು ಹಜ್‌ನ ಸಂದರ್ಭದಲ್ಲಿ ಲಕ್ಷಾಂತರ ಟಿಕೆಟ್‌ಗಳನ್ನು ಒಟ್ಟಿಗೇ ಖರೀದಿಸಿದರೂ ಸರಾಸರಿ 48,000 ರೂಪಾಯಿಗಳನ್ನು ಪಡೆಯುತ್ತದೆ. ಅಂದರೆ ಪ್ರತಿ ಯಾತ್ರಿಕನಿಗೆ ಸರ್ಕಾರ ಕನಿಷ್ಠ 32,000 ರೂಪಾಯಿಗಳಷ್ಟನ್ನು ಸಬ್ಸಿಡಿಯಾಗಿ ನೀಡುತ್ತದೆ. ಇದರ ಹೊರತಾಗಿ ಆ ಮೊತ್ತಕ್ಕೆ ಅನ್ವಯಿಸುವ ಸೇವಾ ಶುಲ್ಕ ಇತ್ಯಾದಿಗಳೆಲ್ಲಾ ಸೇರಿ ಪ್ರಯಾಣ ಶುಲ್ಕ 50,000 ರೂಪಾಯಿಗಳನ್ನು ಮೀರುತ್ತದೆ.

ಎಂಬತ್ತರ ದಶಕದ ಅಂತ್ಯದಲ್ಲಿ `ಹಿಂದುತ್ವ~ ರಾಜಕಾರಣ ಹಜ್ ಸಬ್ಸಿಡಿಯ ಕುರಿತು ಚರ್ಚೆ ಆರಂಭಿಸಿದ ಹೊತ್ತಿನಲ್ಲೇ ಅನೇಕ ಪ್ರಜ್ಞಾವಂತ ಮುಸ್ಲಿಮರೂ ಹಜ್ ಸಬ್ಸಿಡಿಯಲ್ಲ, ಅದೊಂದು `ಹಜ್ ಹಗರಣ~ ಎಂದು ಟೀಕಿಸಿ ಸಬ್ಸಿಡಿಯನ್ನು ರದ್ದು ಪಡಿಸಬೇಕೆಂದಿದ್ದರು. ಅಷ್ಟೇಕೆ ತೊಂಬತ್ತರ ದಶಕದಲ್ಲಿ ಪಿ.ವಿ. ನರಸಿಂಹರಾವ್ ಸರ್ಕಾರವಿರುವಾಗಲೇ ಇದನ್ನು ರದ್ದು ಪಡಿಸುವ ಕುರಿತಂತೆ ಚರ್ಚೆಗಳಾಗಿದ್ದವು.

ಈಗಿನಂತೆಯೇ ಆಗಲೂ ಅನೇಕ ಮುಸ್ಲಿಮ್ ಸಂಸದರು ಅದಕ್ಕೆ ಬೆಂಬಲವನ್ನೂ ಸೂಚಿಸಿದ್ದರು. ಆದರೂ ಪಿ.ವಿ. ನರಸಿಂಹರಾವ್ ಸರ್ಕಾರ ಈ ಕುರಿತಂತೆ ಒಂದು ನಿರ್ಧಾರವನ್ನು ಕೈಗೊಳ್ಳಲಿಲ್ಲ.

ತಮಾಷೆಯೆಂದರೆ ಹಜ್ ಸಬ್ಸಿಡಿಯನ್ನು ಬಹುವಾಗಿ ವಿರೋಧಿಸುತ್ತಿದ್ದ ಬಿಜೆಪಿಯ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದಾಗಲೂ ಅದು ಹಜ್ ಸಬ್ಸಿಡಿಯನ್ನು ಹಿಂತೆಗೆದುಕೊಳ್ಳಲಿಲ್ಲ. ಬದಲಿಗೆ 2002ರಲ್ಲಿ 1954ರ ಹಜ್ ಸಮಿತಿ ಕಾಯ್ದೆಗೆ ತಿದ್ದುಪಡಿ ತಂದು ಸಬ್ಸಿಡಿಯನ್ನು ಮುಂದುವರಿಸಿತು.

ಹಜ್‌ಯಾತ್ರೆ ನಡೆಸುವ ಮುಸ್ಲಿಮರಿಗೆ ಬೇಡವಾದ, ಆದರೆ ಎಲ್ಲ ಆಡಳಿತಾರೂಢ ಪಕ್ಷಗಳಿಗೂ ಬೇಕಾದ ಈ ಸಬ್ಸಿಡಿಗೊಂದು ಅಂತ್ಯ ಹಾಡಲು ನ್ಯಾಯಾಲಯದ ಮಧ್ಯ ಪ್ರವೇಶ ಯಾಕೆ ಬೇಕಾಯಿತು ಎಂಬ ಪ್ರಶ್ನೆಗೆ ಉತ್ತರ ಹುಡುಕಿದರೆ ನಮ್ಮ ರಾಜಕೀಯ ಪಕ್ಷಗಳ ಓಲೈಕೆಯ ರಾಜಕಾರಣದ ಕೆಟ್ಟ ಮುಖವೊಂದು ಅನಾವರಣಗೊಳ್ಳುತ್ತದೆ.

 ಎಲ್ಲಾ ರಾಜಕೀಯ ಪಕ್ಷಗಳ ಮಟ್ಟಿಗೂ ಜನಪ್ರಿಯವಲ್ಲದ ನಿರ್ಧಾರಗಳು ಬೇಕಾಗಿಲ್ಲ. ಜನಪರ ನಿರ್ಧಾರಗಳೆಲ್ಲವೂ ಜನಪ್ರಿಯವಾಗಿರಬೇಕಿಲ್ಲ ಎಂಬ ತತ್ವದಲ್ಲಿಯೂ ಅವುಗಳಿಗೆ ನಂಬಿಕೆ ಇಲ್ಲ. ವಿದೇಶಾಂಗ ಸೇವೆಯಲ್ಲಿದ್ದ ಸೈಯ್ಯದ್ ಶಹಾಬುದ್ದೀನ್ ಒಂದು ದಶಕದ ಹಿಂದೆಯೇ ಹಜ್ ಸಬ್ಸಿಡಿ ವ್ಯವಹಾರದಲ್ಲಿ ಇರಬಹುದಾದ ಲಂಚದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು.

ಸುಪ್ರೀಂ ಕೋರ್ಟ್ ಹಜ್ ಸಮಿತಿಯ ವ್ಯವಹಾರಗಳನ್ನೂ ಪರಿಶೀಲಿಸುವುದಾಗಿ ಹೇಳಿರುವುದರಿಂದ 2ಜಿ ಹಗರಣದಂಥ, ಹಲವು ಸರ್ಕಾರಗಳ ಪಾಲಿರುವ ಮತ್ತೊಂದು ಹಗರಣವೂ ನ್ಯಾಯಾಂಗದ ಮೂಲಕವೇ ಹೊರಬರಬಹುದೆಂದು ನಿರೀಕ್ಷಿಸಬಹುದು.

ಸಬ್ಸಿಡಿ ರಹಿತ ಅಗ್ಗದ ಪ್ರಯಾಣ: ಹಜ್ ಸಬ್ಸಿಡಿಯನ್ನು ಹಿಂತೆಗೆದುಕೊಂಡಿದ್ದರಿಂದ ಹಜ್ ಪ್ರಯಾಣದ ವಿಮಾನ ಯಾನ ದರವೇನೂ ಹೆಚ್ಚಬೇಕಾಗಿಲ್ಲ. 
 

ಸಂಸತ್ತು ಅಂಗೀಕರಿಸಿದ ಕಾಯ್ದೆಯೊಂದರ ಮೂಲಕ ಸರ್ಕಾರಿ ಉಸ್ತುವಾರಿ ಸ್ವಾಯತ್ತ ಸಂಸ್ಥೆಯಾಗಿರುವ ಹಜ್ ಸಮಿತಿ  ಮಲೇಶಿಯಾದ ತಾಬೂಂಗ್ ಹಜ್ ಸಂಘಟನೆಯ ಮಾದರಿಯನ್ನು ಅನುಸರಿಸಬಹುದು. ಅದಕ್ಕಿಂತಲೂ ಸುಲಭವಾದ ಮತ್ತೊಂದು ವಿಧಾನವೆಂದರೆ ಹಜ್ ಯಾತ್ರಿಕರನ್ನು ಕರೆದೊಯ್ಯುವ ಮತ್ತು ಕರೆತರುವ ಕ್ರಿಯೆಯನ್ನು ಏರ್ ಇಂಡಿಯಾದ ಏಕಸ್ವಾಮ್ಯಕ್ಕೆ ಬಿಡದೆ ಸ್ಪರ್ಧಾತ್ಮಕ ಟೆಂಡರ್‌ಗಳ ಮೂಲಕ ವಿಮಾನ ಯಾನ ಸೇವೆಯನ್ನು ಆರಿಸಿಕೊಳ್ಳುವುದು.

ಹಜ್ ಯಾತ್ರೆಗೆ ಅಗತ್ಯವಿರುವ ವಿಮಾನಗಳನ್ನು ಬಾಡಿಗೆಗೆ ಪಡೆಯುವುದರಿಂದ ವಾಸ್ತವದಲ್ಲಿ ಪ್ರಯಾಣ ದರ ಕಡಿಮೆಯಾಗಬೇಕು. ಹಜ್ ಯಾತ್ರಾ ಸಂಘಟನೆಯ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದ ಸೈಯದ್ ಶಹಾಬುದ್ದೀನ್ ಅವರ ಅಭಿಪ್ರಾಯದಲ್ಲಿ ಈ ಬಗೆಯ ವಿಶೇಷ ವಿಮಾನಗಳ ಪ್ರಯಾಣ ದರ ಒಟ್ಟಾರೆಯಾಗಿ ಸಾಮಾನ್ಯ ಪ್ರಯಾಣ ದರದ ಮೂರನೇ ಎರಡರಷ್ಟಿರುತ್ತದೆ.

ಅಂದರೆ 32,000 ರೂಪಾಯಿಗಳಷ್ಟಿರುವ ಈ ಪ್ರಯಾಣದರ ಸುಮಾರು 21,000 ರೂಪಾಯಿಗಳಿಗೆ ಇಳಿಯುತ್ತದೆ. ಹಾಗೆಯೇ ಮೆಕ್ಕಾದಲ್ಲಿ ವಸತಿ ಇತ್ಯಾದಿಗಳಿಗಾಗಿ ರಿಯಲ್ ಎಸ್ಟೇಟ್ ಏಜೆಂಟರ ಮೂಲಕ ಹಜ್ ಸಮಿತಿ ವ್ಯವಹರಿಸುವ ಬದಲಿಗೆ ಸರ್ಕಾರದ ಮೂಲಕ ಸೌದಿ ಸರ್ಕಾರದೊಂದಿಗೆ ವ್ಯವಹರಿಸಿದರೆ ಈಗಿರುವ ಒಟ್ಟು ಹಜ್ ಯಾತ್ರೆಯ ಖರ್ಚು ಕಡಿಮೆಯಾಗುತ್ತದೆ.

ಇಂಡೋನೇಷಿಯಾದಂಥ ದೇಶಗಳು ಈಗಾಗಲೇ ಇದನ್ನು ಮಾಡಿ ತೋರಿಸಿವೆ. ಆದರೆ ಹಜ್ ಸಮಿತಿ ಎಂಬುದು ರಾಜಕೀಯ ನೇಮಕಾತಿಗಳ ಮೂಲಕ ನಡೆಯುವ ವ್ಯವಸ್ಥೆಯಾಗಿರುವುದರಿಂದ ಇಲ್ಲಿ ವ್ಯಾವಹಾರಿಕ ಆಸಕ್ತಿಗಳಿಗಿಂತ ಆಡಳಿತಾರೂಢರ ಇಷ್ಟಾನಿಷ್ಟಗಳೇ ಮುಖ್ಯವಾಗುತ್ತಿವೆ.

ಹಜ್ ಯಾತ್ರೆಯ ವಿಷಯವನ್ನು ಯಾತ್ರಿಕರಿಗೆ ಬಿಟ್ಟು ಕೊಟ್ಟು ಸರ್ಕಾರ ಕೇವಲ ವ್ಯವಸ್ಥೆ ಪಾರದರ್ಶಕವಾಗಿದೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳುವುದಕ್ಕೆ ಸೀಮಿತವಾಗಿ ಉಳಿದರೆ ಹಜ್ ಯಾತ್ರೆ ಈಗಿನದ್ದಕ್ಕಿಂತ ಹೆಚ್ಚು ಅಗ್ಗವಾಗುವುದರಲ್ಲಿ ಸಂಶಯವಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT