ಹಜ್ ಯಾತ್ರಿಕರಿಗೆ ನೀಡಲಾಗುವ ಸಬ್ಸಿಡಿ ಯಾಕೆ ಆರಂಭವಾಯಿತು ಎಂಬುದು ಕುತೂಹಲಕಾರಿ. ಎಪ್ಪತ್ತರ ದಶಕದಲ್ಲಿ ಈ ವ್ಯವಸ್ಥೆ ಆರಂಭಗೊಂಡದ್ದು ಅಂಡಮಾನ್-ನಿಕೋಬಾರ್ಗೆ ಪ್ರಯಾಣಿಸುವವರಿಗೆ ನೆರವು ನೀಡಲು. ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾದ ಅಡಿಯಲ್ಲಿ ಮೊಘಲ್ಲೇನ್ ಎಂಬ ಪ್ರಯಾಣಿಕರ ಹಡಗುಗಳನ್ನು ನಿರ್ವಹಿಸುತ್ತಿದ್ದ ಸಂಸ್ಥೆಯಿತ್ತು. ಇದಕ್ಕೆ ಸೇರಿದ ಎಂವಿ ಅಕ್ಬರ್ ಮತ್ತು ಎಂವಿ ಸುಲೇಮಾನ್ ಎಂಬ ಎರಡು ಹಡಗುಗಳನ್ನು ಅಂಡಮಾನ್-ನಿಕೋಬಾರ್ಗೆ ಪ್ರಯಾಣ ಸೌಕರ್ಯವನ್ನು ಒದಗಿಸುತ್ತಿದ್ದವು. ಹಜ್ನ ಸಂದರ್ಭದಲ್ಲಿ ಈ ಹಡಗುಗಳನ್ನು ಹಜ್ ಯಾತ್ರಿಕರಿಗಾಗಿ ಬಿಟ್ಟು ಕೊಡಲಾಗುತ್ತಿತ್ತು. ಪರಿಣಾಮವಾಗಿ ಅಂಡಮಾನ್-ನಿಕೋಬಾರ್ಗಳಿಗೆ ಹೋಗುವವರಿಗೆ ತೊಂದರೆಯಾಗುತ್ತಿತ್ತು. ಅವರು ವಾಯು ಮಾರ್ಗವನ್ನಷ್ಟೇ ಬಳಸಬೇಕಾಗಿದ್ದರಿಂದ ಅದರ ಪ್ರಯಾಣ ದರ ದೊಡ್ಡ ಹೊರೆಯಾಗಿತ್ತು. ಇದನ್ನು ನಿವಾರಿಸಲು ಸಬ್ಸಿಡಿ ಪದ್ಧತಿ ಆರಂಭವಾಯಿತು.
ಎಪ್ಪತ್ತರ ದಶಕದ ಮಧ್ಯ ಭಾಗದ ಹೊತ್ತಿಗೆ ಪ್ರಯಾಣಿಕರ ಹಡಗುಗಳ ಸಂಖ್ಯೆ ವಿಶ್ವಾದ್ಯಂತ ಕಡಿಮೆಯಾಗತೊಡಗಿತು. ಈ ಹೊತ್ತಿಗಾಗಲೇ ಹಜ್ ಯಾತ್ರೆ ಎಂಬುದು ಬಹುತೇಕ ವಾಯು ಮಾರ್ಗಕ್ಕೆ ಬದಲಾಗಿತ್ತು. ಒಮ್ಮೆ ಸೌದಿ ಅರೇಬಿಯಾಕ್ಕೆ ಹೋಗಿ ಬರುವವರಿಗೆ ಸಬ್ಸಿಡಿ ಒದಗಿಸುವುದು ಪದೇ ಪದೇ ಅಂಡಮಾನ್-ನಿಕೋಬಾರ್ ಮಧ್ಯೆ ಪ್ರಯಾಣಿಸುವವರಿಗೆ ಕೊಡುವ ಸಬ್ಸಿಡಿಗಿಂತ ಅಗ್ಗ ಎಂಬ ನಿರ್ಧಾರಕ್ಕೆ ಸರ್ಕಾರ ಬಂತು.
ಹಾಗಾಗಿ ಹಜ್ ಸಬ್ಸಿಡಿ ವ್ಯವಸ್ಥೆ ಆರಂಭವಾಯಿತು. ಈ ರೀತಿ ಇದನ್ನು ಬದಲಾಯಿಸಿದ ಖ್ಯಾತಿ ಆಗಿನ ಪ್ರಧಾನಿ ಇಂದಿರಾಗಾಂಧಿಯವರದ್ದು. ಅವರ `ಜಾತ್ಯತೀತ~ ಇಮೇಜ್ಗೆ ಪೂರಕವಾಗಿ ಈ ವ್ಯಾವಹಾರಿಕ ನಿರ್ಧಾರವನ್ನು ಬಳಸಲಾಯಿತು. ಅಲ್ಲಿಂದ ಮುಂದಕ್ಕೆ ಇದು ಓಲೈಕೆ ರಾಜಕಾರಣದ ಒಂದು ಭಾಗವಾಯಿತು.