ಹಟ್ಟಿ ಚಿನ್ನದ ಗಣಿ: ಸ್ಥಳೀಯ ಚಿನ್ನದ ಗಣಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಹಂಗಾಮಿ ಕಾರ್ಮಿಕರನ್ನು ಕಾಯಂಗೊಳಿಸುವಂತೆ ಗುಲ್ಬರ್ಗ ಹೈಕೋರ್ಟ್ ಸಂಚಾರಿ ಪೀಠ ಬುಧವಾರ (ಏ.3) ಆದೇಶ ನೀಡಿದೆ ಎಂದು ಹಂಗಾಮಿ ಕಾರ್ಮಿಕರ ಸಂಘದ ಅಧ್ಯಕ್ಷ ಆರ್. ಮಾನ್ಸಯ್ಯ ಹೇಳಿದರು.
ಇಲ್ಲಿಯ ಲಿಂಗಾವಧೂತ ಶಾಂತಿ ಧಾಮದ ಆವರಣದಲ್ಲಿರುವ ಕಲ್ಯಾಣ ಮಂಟಪದಲ್ಲಿ ಗುರುವಾರ ಕರೆದಿದ್ದ ಹಂಗಾಮಿ ಕಾರ್ಮಿಕರ ಸಭೆಯನ್ನುದ್ದೇಶಿಸಿ ಮಾತನಾಡಿ, ಕಳೆದ 12 ವರ್ಷಗಳಿಂದ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಅನುಭವ ಉಳ್ಳ ಹಂಗಾಮಿ ಕೆಲಸಗಾರರನ್ನು ಬಿಟ್ಟು ಗಣಿ ಆಡಳಿತ 150 ತಾಂತ್ರಿಕ ಹುದ್ದೆಗೆ ಅನುಭವ ಇಲ್ಲದವರಿಗೆ ನೇಮಕ ಮಾಡಿಕೊಂಡಿತು. ಈ ನೇಮಕಾತಿಯಲ್ಲಿ ನಮ್ಮನ್ನು ನಿರ್ಲಕ್ಷಿಸಿ ಅನ್ಯಾಯ ಮಾಡಲಾಗಿದೆ ಎಂದು 11 ಜನ ಹಂಗಾಮಿ ಕಾರ್ಮಿಕರು ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದರು.
ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಪೀಠ ಈ 11 ಜನ ಸೇರಿದಂತೆ ಕಂಪೆನಿಯಲ್ಲಿರುವ 498 ಹಂಗಾಮಿ ಕಾರ್ಮಿಕರನ್ನು ಇನ್ನೆರಡು ತಿಂಗಳುಗಳ ಒಳಗೆ ಕಾಯಂಗೊಳಿಸುವಂತೆ ಆದೇಶ ಹೊರಡಿಸಿದೆ ಎಂದರು. ಈ ಆದೇಶ ಹಟ್ಟಿ ಚಿನ್ನದ ಗಣಿ ಕಂಪೆನಿಗೆ ಮಾತ್ರ ಅನ್ವಯಿಸುವುದಿಲ್ಲ. ರಾಜ್ಯದ ಸರ್ಕಾರಿ, ಅರೆ ಸರ್ಕಾರಿ ಸೇರಿದಂತೆ ಖಾಸಗಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ಹಂಗಾಮಿ ಕಾರ್ಮಿಕರಿಗೆ ಅನ್ವಯಿಸುತ್ತದೆ ಎಂದರು.
ಇದು ಕಾರ್ಮಿಕರ ಹೋರಾಟಕ್ಕೆ ಸಂದ ಜಯ. ಈ ಹೋರಾಟಕ್ಕೆ ಬೆಂಬಲಿಸಿದ ಎ್ಲ್ಲಲ ಸಂಘ, ಸಂಸ್ಥೆ, ಕಾರ್ಮಿಕರಿಗೆ ಹಾಗೂ ಮುಖಂಡರಿಗೆ ಈ ಸಂದರ್ಭದಲ್ಲಿ ಅಭಿನಂದಿಸಿದರು. ಹಂಗಾಮಿ ಕಾರ್ಮಿಕ ಸಂಘದ ಪದಾಧಿಕಾರಿಗಳು ಇದ್ದರು.