ಹೂವಿನಹಡಗಲಿ: ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿಯ ಅಧಿಕಾರಿಗಳು ಗುರುವಾರ ತಾಲ್ಲೂಕಿನ ಎರಡು ಖಾಸಗಿ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿ, ಇಬ್ಬರು ನಕಲಿ ವೈದ್ಯರನ್ನು ಪತ್ತೆ ಹಚ್ಚಿದ್ದಾರೆ.
ಯಾವುದೇ ಅಂಗೀಕೃತ ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರ ಪಡೆಯದೇ ಹಳೇ ಬಸ್ ನಿಲ್ದಾಣ ಹತ್ತಿರ ಕ್ಲಿನಿಕ್ ನಡೆಸುತ್ತಿದ್ದ ಜಯಕುಮಾರ ಮತ್ತು ತಾಲ್ಲೂಕಿನ ದಾಸರಹಳ್ಳಿ ತಾಂಡದ ರಾಕೇಶ ಮಂಡಲ ಎಂಬುವವರನ್ನು ಕೆಎಯುಪಿ ಮಂಡಳಿ ಅಧಿಕಾರಿಗಳ ದೂರಿನ ಮೇರೆಗೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಮಂಡಳಿ ಅಧಿಕಾರಿಗಳ ದಾಳಿಯಿಂದ ತಬ್ಬಿಬ್ಬಾದ ನಕಲಿ ವೈದ್ಯ ಜಯ ಕುಮಾರ, ತಾನು ಹೊಸಪೇಟೆಯ ನಿವಾಸಿಯಿದ್ದು, ಪಶ್ಚಿಮ ಬಂಗಾಳದಲ್ಲಿ ಬಿಎಎಂಎಸ್ ಪದವಿ ಮುಗಿಸಿ ಇಲ್ಲಿ ಆಸ್ಪತ್ರೆ ತೆರೆದಿರುವುದಾಗಿ ಹೇಳಿದ. ನಂತರ ಪ್ರಮಾಣ ಪತ್ರಗಳನ್ನು ಪರಿಶೀಲಿಸಿದಾಗ, ಅವು ಕೊಲ್ಕತ್ತಾ ವಿಳಾಸದ ‘ಇಂಡಿಯನ್ ಬೋರ್ಡ್ ಆಫ್ ಆಲ್ಟರ್ ನೆಟಿವ್ ಮೆಡಿಸನ್್ಸ’ ಎಂಬ ದೂರಶಿಕ್ಷಣ ಕೇಂದ್ರದ ಪ್ರಮಾಣ ಪತ್ರ ಎಂದು ಖಚಿತಪಡಿಸಿ ಕೊಂಡರು.
ವೈದ್ಯಕೀಯ ಪದವಿ ಓದದೇ ದೂರ ಶಿಕ್ಷಣ ಕೇಂದ್ರದ ಪ್ರಮಾಣ ಪತ್ರಗಳನ್ನೇ ಆಧಾರವಾಗಿಟ್ಟುಕೊಂಡು ವೈದ್ಯ ವೃತ್ತಿ ನಡೆಸುತ್ತಿರುವುದರಿಂದ ಈ ಇಬ್ಬರನ್ನು ‘ನಕಲಿ ವೈದ್ಯ’ರೆಂದು ಪರಿಗಣಿಸಿ ಕಾನೂನುರೀತ್ಯಾ ಕ್ರಮ ಜರುಗಿಸುವು ದಾಗಿ ಕೆಎಯುಪಿ ಮಂಡಳಿ ಅಧ್ಯಕ್ಷ ಡಾ. ಸತ್ಯಮೂರ್ತಿ ಭಟ್ ತಿಳಿಸಿದರು.
ಆಸ್ಪತ್ರೆಯಲ್ಲಿದ್ದ ಔಷಧಿ, ಉಪಕರಣ ಗಳನ್ನು ಜಪ್ತಿ ಮಾಡಿ ನಂತರ ಕ್ಲಿನಿಕ್ಗೆ ಬೀಗಮುದ್ರೆ ಹಾಕಲಾಯಿತು. ದಾಳಿ ಸಂದರ್ಭದಲ್ಲಿ ಕೆಎಯುಪಿ ಮಂಡಳಿ ರಿಜಿಸ್ಟ್ರಾರ್ ಡಾ. ತಿಮ್ಮಪ್ಪ ಶೆಟ್ಟಿಗಾರ, ಸದಸ್ಯ ಅಪ್ರಮೇಯ ರಾಯರ್ ಇತರರಿದ್ದರು.