ಜಕಾರ್ತ, (ಎಪಿ): ಭಾರಿ ಸಂಖ್ಯೆಯಲ್ಲಿ ಪ್ರಯಾಣಿಕರಿದ್ದ ಹಡಗಿಗೆ ಬೆಂಕಿ ತಗುಲಿದ ಪರಿಣಾಮ 11 ಮಂದಿ ಮೃತಪಟ್ಟಿದ್ದು, ಗಾಬರಿಗೊಂಡ ಹಲವರು ಸಮುದ್ರಕ್ಕೆ ಹಾರಿದ ಘಟನೆ ಶುಕ್ರವಾರ ನಡೆದಿದೆ. ಘಟನೆಯಲ್ಲಿ ಸುಮಾರು 200 ಜನರಿಗೆ ಗಾಯಗಳಾಗಿವೆ.
ಸಾರಿಗೆ ಸಚಿವಾಲಯದ ವಕ್ತಾರ ಬ್ಯಾಂಬಂಗ್ ಇರ್ವಾನ್ ಮಾತನಾಡಿ, ಬೆಳಗ್ಗಿನ ಜಾವ ಮೆರಾಕ್ ಬಂದರಿನಿಂದ ಸುಮಾತ್ರದೆಡೆಗೆ ಹೊರಟ 40 ನಿಮಿಷಗಳಲ್ಲೇ ಹಡಗಿನಲ್ಲಿ ಬೆಂಕಿ ತಗುಲಿತು ಎಂದು ತಿಳಿಸಿದರು.
ಹಡಗು ಸುಮಾರು ಮೂರು ಕಿ.ಮೀ ದೂರ ಸಾಗಿತ್ತು. ದಡದಿಂದಲೇ ಹಡಗಿನಿಂದ ಕಪ್ಪು ಹೊಗೆ ಹೊರಬರುತ್ತಿರುವುದು ಕಾಣಿಸಿದ ಕೂಡಲೇ ಐದು ರಕ್ಷಣಾ ಹಡಗುಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು ಎಂದು ಹೇಳಿದರು.
ಮುಂಜಾನೆ ವೇಳೆಗೆ ಅದರಲ್ಲಿದ್ದ ಸುಮಾರು 427 ಜನರನ್ನು ಸುರಕ್ಷಿತವಾಗಿ ಹೊರಕ್ಕೆ ತರಲಾಗಿದೆ. ಈ ಅನಾಹುತಕ್ಕೆ ಸ್ಪಷ್ಟ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ಸಚಿವಾಲಯದ ಮತ್ತೊಬ್ಬ ಅಧಿಕಾರಿ ವಿರಾಟ್ನೊ ತಿಳಿಸಿದರು.
ವ್ಯಕ್ತಿಯೊಬ್ಬ ಸಿಗರೇಟ್ ಸೇದಿ ಅದರ ತುಂಡನ್ನು ಹಡಗಿನಲ್ಲಿ ಎಸೆದಿದ್ದೇ ಈ ಅನಾಹುತಕ್ಕೆ ಕಾರಣವಿರಬಹುದು ಎಂದು ಈ ಅವಘಡದಲ್ಲಿ ಬದುಕುಳಿದ ಜನರು ತಿಳಿಸಿದ್ದಾರೆ.
ಇಂಡೊನೇಷ್ಯಾದಲ್ಲಿ 17,000 ದ್ವೀಪಗಳಿದ್ದು ದೇಶದ 23.50 ಕೋಟಿ ಜನರು ಪ್ರಯಾಣಕ್ಕೆ ಹೆಚ್ಚಾಗಿ ದೋಣಿ, ಹಡಗುಗಳನ್ನೇ ಅವಲಂಬಿಸಿದ್ದಾರೆ. ಸಾಮಾನ್ಯವಾಗಿ ದೋಣಿಗಳು, ಹಡಗುಗಳಲ್ಲಿ ಜನದಟ್ಟಣೆ ಹೆಚ್ಚಾಗಿರುತ್ತದೆ. ಅಲ್ಲದೇ ಸುರಕ್ಷತೆಗೆ ಹೆಚ್ಚು ಒತ್ತು ನೀಡಿಲ್ಲದ ಕಾರಣ ಪದೇ ಪದೇ ಅಪಘಾತಗಳು ಸಂಭವಿಸುತ್ತವೆ.