ಮಾನ್ವಿ: ತಾಲ್ಲೂಕಿನ ರಾಜಲಬಂಡಾ ಗ್ರಾಮದ ಸಂಯುಕ್ತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶಾಲೆಯ ಕಟ್ಟಡ ನಿರ್ಮಾಣ ಹಾಗೂ ಅಭಿವೃದ್ಧಿ ಗೆಂದು ಸರ್ಕಾರದಿಂದ ಮಂಜೂರಾದ ಲಕ್ಷಾಂತರ ರೂಪಾಯಿ ದುರ್ಬಳಕೆ ಮಾಡಿಕೊಂಡಿರುವುದಾಗಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಹುಲಗಯ್ಯ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ.ಎರಡು ತಿಂಗಳಿಂದ ಶಾಲೆಯ ಮುಖ್ಯೋಪಾಧ್ಯಾಯ ದೊಡ್ಡರಂಗೇಗೌಡ ಅನಧಿಕೃತವಾಗಿ ಗೈರಾಗಿರುವ ಬಗ್ಗೆ ತಾವು ಕ್ಷೇತ್ರ ಶಿಕ್ಷಣಾಧಿಕಾರಿಗೆ ಹಲವು ಬಾರಿ ದೂರು ಸಲ್ಲಿಸಿದ್ದರೂ ಕ್ರಮ ಜರುಗಿಸದಿರುವುದು ಸಂದೇಹಕ್ಕೆ ಕಾರಣವಾಗಿದೆ ಎಂದಿದ್ದಾರೆ.
ದೂರಿನ ವಿವರ: ರಾಜಲಬಂಡಾ ಗ್ರಾಮದಲ್ಲಿ ಈ ಹಿಂದೆ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಸಂಯುಕ್ತವಾಗಿ ಸಂಯುಕ್ತ ಪ್ರೌಢಶಾಲೆ ಇತ್ತು. ಈ ಸಂದರ್ಭದಲ್ಲಿ ಪ್ರೌಢಶಾಲೆಯ ಮುಖ್ಯೋಪಾ ಧ್ಯಾಯ ದೊಡ್ಡರಂಗೇಗೌಡ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಪ್ರತ್ಯೇಕವಾದ ನಂತರ ಪ್ರೌಢಶಾಲೆಯ ಮುಖ್ಯಪಾಧ್ಯಾಯ ದೊಡ್ಡ ರಂಗೇಗೌಡ ಪ್ರಾಥಮಿಕ ವಿಭಾಗದ ಅಧಿಕಾರವನ್ನು ಬಿಟ್ಟುಕೊಡದೆ ತಾವೇ ಚಲಾಯಿಸಿದ್ದರು. ನಂತರ ಪ್ರಾಥಮಿಕ ಶಾಲೆಗೆ ಮುಖ್ಯೋಪಾಧ್ಯಾಯರಾಗಿ ವರ್ಗವಾಗಿ ಬಂದಿದ್ದ ಟಿ.ಭೋಗೇಶ್ ಅವರಿಗೂ ದೊಡ್ಡರಂಗೇಗೌಡ ಅಧಿಕಾರ ಹಸ್ತಾಂತರಿಸಿರಲಿಲ್ಲ. ಪ್ರಾಥಮಿಕ ಶಾಲೆಯ ಅಧಿಕಾರ ಪಡೆಯುವಲ್ಲಿಯೂ ಟಿ.ಭೋಗೇಶ್ ನಿರ್ಲಕ್ಷ್ಯ ವಹಿಸಿದ್ದರು ಎಂದಿದ್ದಾರೆ.
ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ರಚನೆಗೆ ಮುಂಚೆಯೇ ಪ್ರೌಢಶಾಲೆಯ ಮುಖ್ಯೋ ಪಾಧ್ಯಾಯ ದೊಡ್ಡರಂಗೇಗೌಡ ಅಕ್ರಮವಾಗಿ ಸರ್ವ ಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ ಪ್ರಾಥಮಿಕ ಶಾಲೆಗೆ ಮಂಜೂರಾದ 3 ಕೊಠಡಿಗಳ ಅನುದಾನ ಹಾಗೂ ಶಾಲಾಭಿವೃದ್ಧಿ ಅನುದಾನ ಸೇರಿದಂತೆ ಒಟ್ಟು ಸುಮಾರು 11 ಲಕ್ಷ ರೂಪಾಯಿ ಬಳಸಿಕೊಂಡು ಶಾಲಾ ಕೊಠಡಿಗಳ ನಿರ್ಮಾಣ ಆರಂಭಿಸಿದ್ದರು. ಆದರೆ ಈಗ ಶಾಲಾ ಕೊಠಡಿಗಳ ನಿರ್ಮಾಣ ಅಪೂರ್ಣಗೊಂಡಿದ್ದು ಬ್ಯಾಂಕ್ ಖಾತೆಯಲ್ಲಿ ನಯಾಪೈಸೆ ಉಳಿದಿಲ್ಲ ಎಂಬ ದೂರು ಅವರದು.
ಮುಖ್ಯೋಪಾಧ್ಯಾಯ ದೊಡ್ಡರಂಗೇಗೌಡ ಇಷ್ಟೆಲ್ಲ ಭ್ರಷ್ಟಾಚಾರ ಎಸಗಿ ಎರಡು ತಿಂಗಳಿಂದ ಅನಧಿಕೃತವಾಗಿ ಗೈರಾಗಿದ್ದಾರೆ. ಪ್ರಾಥಮಿಕ ಶಾಲೆಗೆ ಮುಖ್ಯಗುರು ಆಗಿ ವರ್ಗವಾಗಿ ಬಂದಿದ್ದ ಟಿ.ಭೋಗೇಶ ಅಧಿಕಾರ ವಹಿಸಿಕೊಳ್ಳದಿರುವುದು ಕಾನೂನು ಬಾಹಿರವಾಗಿದೆ, ಶಿಕ್ಷಣ ಇಲಾಖೆ ಅಧಿಕಾರಿಗಳು ಮೌನವಹಿಸದೆ ಸದರಿ ಪ್ರಕರಣದ ಬಗ್ಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಹುಲುಗಯ್ಯ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.