ನಿಪ್ಪಾಣಿ: ನಿಪ್ಪಾಣಿ ಬಸ್ ನಿಲ್ದಾಣದಲ್ಲಿ ತಮಗೆ ಸಿಕ್ಕ 60 ಸಾವಿರ ರೂಪಾಯಿ ನಗದು, ಲ್ಯಾಪ್ಟಾಪ್ ಮತ್ತು ಮಹತ್ವದ ದಾಖಲೆಗಳನ್ನು ಇಲ್ಲಿಗೆ ಸಮೀಪದ ಪಾಂಗೀರ ಗ್ರಾಮದ ವಿವೇಕ ರಾಮಚಂದ್ರ ಶಿತೋಳೆ ಎಂಬ ಯುವಕ ಪ್ರಾಮಾಣಿಕವಾಗಿ ವಾರಸುದಾರರಿಗೆ ತಲುಪಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಿಪ್ಪಾಣಿ ಬಸ್ ನಿಲ್ದಾಣದಲ್ಲಿ ಈ ಯುವಕ ಮೋಟಾರ್ ಬೈಕ್ ನಿಲ್ಲಿಸಲು ಇರುವ ಪಾರ್ಕಿಂಗ್ ವ್ಯವಸ್ಥೆಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ.
ಇಲ್ಲಿನ ನಿಖಿಲ ಶಹಾ ಎಂಬುವರು ತಮ್ಮ ವಾಹನದ ಜತೆಗೆ ರೂ. 60 ಸಾವಿರ ನಗದು ಹಣ, ಲ್ಯಾಪ್ಟಾಪ್ ಮತ್ತು ಮಹತ್ವದ ದಾಖಲೆಗಳುಳ್ಳ ಬ್ಯಾಗನ್ನು ಅಲ್ಲಿಯೇ ಬಿಟ್ಟು ಹೋಗಿದ್ದರು. ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುವಾಗ ವಿವೇಕ ಶಿತೋಳೆ ಅವರಿಗೆ ಆ ಬ್ಯಾಗ್ ಕಾಣಿಸಿತು. ತಕ್ಷಣ ಬ್ಯಾಗನ್ನು ಎತ್ತಿ ನೋಡಿದಾಗ ಅದರಲ್ಲಿ ಹಣ, ಲ್ಯಾಪ್ಟಾಪ್ ಮತ್ತು ದಾಖಲೆಗಳು ಇದ್ದುದನ್ನು ನೋಡಿ ಇವುಗಳನ್ನು ಮರಳಿಸಿದರು.
ಬ್ಯಾಗ್ ಪರಿಶೀಲಿಸಿದ ನಿಖಿಲ್ ಶಹಾ ಅವರು ಖುಷಿಯಿಂದ ಒಂದು ಸಾವಿರ ರೂಪಾಯಿಗಳ ಬಹುಮಾನ ಕೊಡಲು ಹೋದಾಗ ವಿವೇಕ ಅವರು ನಯವಾಗಿ ತಿರಸ್ಕರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಪಾರ್ಕಿಂಗ್ದ ಸಹಗುತ್ತಿಗೆದಾರ ಪಟ್ಟನಕುಡಿ ಗ್ರಾಮದ ಆಸಿಫ್ ಕಮತೆ 1997ರಲ್ಲಿ ಇದೇ ಪಾರ್ಕಿಂಗ್ನಲ್ಲಿ ನೌಕರನಾಗಿದ್ದಾಗ ಮಹಾರಾಷ್ಟ್ರದ ಒಬ್ಬ ವ್ಯಾಪಾರಿ ಸುಮಾರು 4.5 ಕೆ.ಜಿ. ಬೆಳ್ಳಿ ಬಿಟ್ಟು ಹೋದಾಗ ಆಸಿಫ್ ಮರಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.