ಕುಣಿಗಲ್: ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲದಿದ್ದರೂ; ಕೆಲ ಪುರಸಭಾ ಸದಸ್ಯರು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಬರ ಪರಿಹಾರ ಯೋಜನೆಯಡಿ ಟ್ಯಾಂಕರ್ ಮೂಲಕ ಕುಡಿಯುವ ನೀರು ವಿತರಿಸಲು ಮಂಜೂರು ಮಾಡಿಸಿದ್ದ 2ಲಕ್ಷ ರೂಪಾಯಿ ಅಪವ್ಯಯವಾಗದಂತೆ ಶಾಸಕರು ತಡೆಹಿಡಿದ ಘಟನೆ ನಡೆದಿದೆ.
ಪಟ್ಟಣದಲ್ಲಿ ಈಗಾಗಲೇ ಶಾಶ್ವತ ಕುಡಿಯುವ ನೀರಿನ ಯೋಜನೆಯಡಿ ದೊಡ್ಡಕೆರೆಯಲ್ಲಿ ಸಾಕಷ್ಟು ನೀರಿನ ಸಂಗ್ರಹ ಇದೆ. ಇದಲ್ಲದೆ 75 ಕೊಳವೆ ಬಾವಿ ಮೂಲಕ ನೀರನ್ನು ಸಂಗ್ರಹಿಸಿ ವಿತರಿಸಲಾಗುತ್ತಿದೆ. ಇಷ್ಟೆಲ್ಲ ವ್ಯವಸ್ಥೆ ಇದ್ದರೂ ಬಂದಿರುವ ಹಣವನ್ನು ಇತರೆ ನಿರ್ವಹಣಾ ಕಾಮಗಾರಿಗಳಿಗೆ ಬಳಸದೆ, ದುರುದ್ದೇಶದಿಂದ ಟ್ಯಾಂಕರ್ ಮೂಲಕ ನೀರು ವಿತರಿಸಲು ಮೀಸಲಿಟ್ಟ ಹಣವನ್ನು ಅಪವ್ಯಯ ಮಾಡಲು ಹೊರಟಿರುವ ಕ್ರಮ ಖಂಡಿಸಿದ ಶಾಸಕ ಬಿ.ಬಿ.ರಾಮಸ್ವಾಮಿಗೌಡ, ವಿತರಣೆ ದೋಷದಿಂದ ನೀರಿನ ಅಭಾವ ಸೃಷ್ಟಿಸಿದ್ದಾರೆ ಎಂದರು.
ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷರಾಗಿರುವ ಶಾಸಕರ ಗಮನಕ್ಕೆ ಬಾರದೆ ಗುತ್ತಿಗೆದಾರರೊಂದಿಗೆ ಶಾಮೀಲಾದ ಕೆಲ ಸದಸ್ಯರು ಹಾಗೂ ಮುಖ್ಯಾಧಿಕಾರಿಗಳು ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಿರುವುದನ್ನು ತೀವ್ರ ತರಾಟೆಗೆ ತೆಗೆದುಕೊಂಡ ಶಾಸಕರು ಟ್ಯಾಂಕ್ ಮೂಲಕ ನೀರನ್ನು ವಿತರಿಸಲು ಮೀಸಲಿಟ್ಟ ಹಣವನ್ನು ಪೈಪ್ಲೈನ್ ಕಾಮಗಾರಿಗೆ ಅಥವಾ ನೀರಿನ ಸಮರ್ಪಕ ವಿತರಣೆಗಾಗಿ ಬಳಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.
ನಾಳೆ ಪೂರ್ವಭಾವಿ ಸಭೆ
ಕೊರಟಗೆರೆ: ತಾಲ್ಲೂಕು ಜಾತ್ಯತೀತ ಜನತಾದಳ ಪರಿಶಿಷ್ಟ ಜಾತಿ ಘಟಕದ ಪದಾಧಿಕಾರಿಗಳ ಸಭೆಯನ್ನು ಮೇ 21ರ ಸೋಮವಾರ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದೆ.ತಾಲ್ಲೂಕು ಘಟಕದ ಪದಾಧಿಕಾರಿಗಳು ತಪ್ಪದೇ ಸಭೆಗೆ ಹಾಜರಾಗಬೇಕು ಎಂದು ಜಿಲ್ಲಾ ಘಟಕದ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.