ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣದ ಜೊತೆ ರಾಜಿ ಅಪಾಯಕಾರಿ

Last Updated 12 ಸೆಪ್ಟೆಂಬರ್ 2011, 18:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಜಾಪ್ರಭುತ್ವ ವ್ಯವ ಸ್ಥೆಯನ್ನು ಬಲಗೊಳಿಸುವ ಹೊಣೆಗಾರಿಕೆ ಹೊಂದಿರುವ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮ ರಂಗಗಳು ಅಧಿಕಾರ ಹಾಗೂ ಹಣದ ಜೊತೆ ರಾಜಿಯಾಗುವ ಮೂಲಕ ಅಪಾಯಕಾರಿ ಸನ್ನಿವೇಶವನ್ನು ಸೃಷ್ಟಿಸಿವೆ ಎಂದು ಖ್ಯಾತ ಪತ್ರಕರ್ತ ಕುಲದೀಪ್ ನಯ್ಯರ್ ಆತಂಕ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಎಂ.ವಿ. ರಾಜಶೇಖರನ್ ಅವರ 84ನೇ ಜನ್ಮ ದಿನದ ಹಿನ್ನೆಲೆಯಲ್ಲಿ ಎಂವಿಆರ್ ಪ್ರತಿಷ್ಠಾನ ಸೋಮವಾರ ನಗರದ ಭಾರತೀಯ ವಿದ್ಯಾಭವನದಲ್ಲಿ ಹಮ್ಮಿ ಕೊಂಡಿದ್ದ ಸಮಾರಂಭದಲ್ಲಿ `ಭಾರತದ ಇಂದಿನ ಪರಿಸ್ಥಿತಿ~ ಎಂಬ ವಿಷಯ ಕುರಿತು ಅವರು ಮಾತನಾಡಿದರು.

ಕಾರ್ಯಾಂಗವನ್ನು ಭ್ರಷ್ಟಾಚಾರ ಆವರಿಸಿಕೊಂಡು ದಶಕಗಳೇ ಕಳೆದಿವೆ. ನ್ಯಾಯಾಂಗದಲ್ಲಿನ ಲಂಚಾವತಾರದ ಬಗ್ಗೆ ಬಹಿರಂಗವಾಗಿ ಮಾತನಾಡುವ ಪರಿಸ್ಥಿತಿ ಕಾಣುತ್ತಿದೆ. ಈಗ ಬಹುತೇಕ ಮಾಧ್ಯಮಗಳು ಕಾರ್ಪೊರೆಟ್ ವಲ ಯದ ಹಿಡಿತಕ್ಕೆ ಸಿಲುಕಿದ್ದು, ಅಲ್ಲಿಯೂ `ಕಾಸಿಗಾಗಿ ಸುದ್ದಿ~ ತಾಂಡವವಾಡುತ್ತಿದೆ. ಎಲ್ಲರೂ ಅಧಿಕಾರ, ಹಣಕ್ಕೆ ಹಾತೊರೆ ಯುತ್ತಿರುವುದು ದುರದೃಷ್ಟಕರ ಎಂದು ನಯ್ಯರ್ ಹೇಳಿದರು.

ನೈತಿಕತೆ ಮಾಯ: `ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ರಾಜಕೀಯ ರಂಗದಲ್ಲಿ ನೈತಿಕತೆಗೆ ಪ್ರಾಧಾನ್ಯ ಇತ್ತು. ಯಾವುದೇ ಕೆಲಸ ಮಾಡುವ ಮುನ್ನ ರಾಜಕಾರಣಿಗಳು ಅದು ನೈತಿಕವೋ? ಅನೈತಿಕವೋ? ಎಂಬುದನ್ನು ಪರಿಶೀಲಿಸಿ ತೀರ್ಮಾನಿಸುತ್ತಿದ್ದರು. ಆದರೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದ ಕಾಲದಿಂದ ನೈತಿಕ ರಾಜಕಾರಣಕ್ಕೆ ತಿಲಾಂಜಲಿ ಇಡುವ ಪ್ರವೃತ್ತಿ ಹೆಚ್ಚಿತು. ಈಗ ರಾಜಕೀಯದಿಂದ ನೈತಿಕತೆ ಸಂಪೂರ್ಣ ವಾಗಿ ದೂರವಾಗಿದೆ~ ಎಂದು ವಿಶ್ಲೇಷಿ ಸಿದರು.

`ಜಯಪ್ರಕಾಶ್ ನಾರಾಯಣ್ ಅವರು ಭ್ರಷ್ಟಾಚಾರದ ವಿರುದ್ಧ ಚಳ ವಳಿ ನಡೆಸುತ್ತಿದ್ದ ಸಂದರ್ಭದಲ್ಲಿ. `ಹೊಸ ನಾಯಕತ್ವ ಸೃಷ್ಟಿಯಾದ ಬಳಿಕ ಭ್ರಷ್ಟಾಚಾರ ಇರುವುದಿಲ್ಲವೇ?~ ಎಂದು ಅವರನ್ನು ಪ್ರಶ್ನಿಸಿದ್ದೆ. ಆಗ ಅಂತಹ ಆಶಯ ಕೂಡ ಕಾಣಿಸಿತ್ತು. ಆದರೆ, ಚಳವಳಿ ನಡೆದ ನೆಲದಲ್ಲೇ ಲಾಲು ಪ್ರಸಾದ್, ಮುಲಾಯಂ ಸಿಂಗ್ ಯಾದವ್‌ರಂತಹವರೂ ಕಾಣಿಸಿ ಕೊಂಡರು~ ಎಂದು ಬೇಸರ ವ್ಯಕ್ತಪಡಿಸಿದರು.

`ಅಣ್ಣಾ ಹಜಾರೆಯವರ ನೇತೃತ್ವ ದಲ್ಲಿ ಭ್ರಷ್ಟಾಚಾರದ ವಿರುದ್ಧ ನಡೆದ ಚಳವಳಿಯನ್ನು ಸಂಪೂರ್ಣವಾಗಿ ನಾನು ಒಪ್ಪುವುದಿಲ್ಲ. ಆದರೆ, ಅದರಲ್ಲಿನ ಕೆಲ ವಿಷಯಗಳ ಬಗ್ಗೆ ಸಹಮತವಿದೆ. ರಾಜಕೀಯದಿಂದ ನೈತಿಕತೆ ದೂರವಾದ ಪರಿಣಾಮವನ್ನು ಅನುಭವಿಸಿದ ಮಧ್ಯಮ ವರ್ಗ ಸಿಡಿದೆದ್ದ ಪರಿಣಾ ಮವಾಗಿಯೇ ಈ ಚಳವಳಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಯಿತು~ ಎಂದರು.

`ಚುನಾಯಿತ ಪ್ರತಿನಿಧಿಗಳನ್ನು `ಹಿಂದಕ್ಕೆ ಕರೆಸಿಕೊಳ್ಳುವ~ ಅಧಿಕಾರ ವನ್ನು ಮತದಾರರಿಗೆ ನೀಡುವುದಕ್ಕೆ ಪೂರಕವಾಗಿ ಚುನಾವಣಾ ವ್ಯವಸ್ಥೆ ಯಲ್ಲಿ ಸುಧಾರಣೆ ತರುವಂತೆ ಆಗ್ರಹಿಸಿ ಹೋರಾಟಕ್ಕೆ ಇಳಿಯಲು ಅಣ್ಣಾ ತಂಡ ಸಿದ್ಧವಾಗುತ್ತಿದೆ. `ಹಿಂದಕ್ಕೆ ಕರೆಸಿ ಕೊಳ್ಳುವ~ ಅಧಿಕಾರವನ್ನು ಜಾರಿಗೆ ತರುವುದು ತಕ್ಷಣವೇ ಸಾಧ್ಯವಾಗ ದಿದ್ದಲ್ಲಿ, ಮತದಾನದ ಸಂದರ್ಭದಲ್ಲೇ ಅಭ್ಯರ್ಥಿಗಳನ್ನು ತಿರಸ್ಕರಿಸುವ ಅವಕಾಶ ವನ್ನಾದರೂ ನೀಡುವ ವ್ಯವಸ್ಥೆ ಜಾರಿಯಾಗಬೇಕು~ ಎಂದು ಸಲಹೆ ಮಾಡಿದರು.

ಸಂಸತ್ತು ಸಾರ್ವಭೌಮ: `ಎಲ್ಲ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲೂ ಸಂಸತ್ತೇ ಸಾರ್ವಭೌಮ. ಜನರೇ ಪ್ರಭು ಗಳಾದರೂ ಚುನಾಯಿತ ಪ್ರತಿನಿಧಿಗಳ ಮೂಲಕವೇ ಸಂಸತ್ತಿಗೆ ನಮ್ಮ ಅಭಿಪ್ರಾ ಯವನ್ನು ತಿಳಿಸಬೇಕು. ಆದರೆ, ಸಂಸತ್ತು ಹೇಗೆ ಕೆಲಸ ಮಾಡುತ್ತದೆ ಎಂಬುದು ಕೂಡ ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ಮುಖ್ಯವಾಗುತ್ತದೆ~ ಎಂದರು.

ಪಕ್ವವಾದ ಕಾಲ: ಯಾವುದೇ ಸಂದರ್ಭದಲ್ಲಿ ದೇಶದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆ ಎದ್ದು ಕಾಣುತ್ತಿದೆ. ಕೇಂದ್ರ ಸರ್ಕಾರ ಹಗರಣ ಗಳಿಂದ ತುಂಬಿ ತುಳುಕುತ್ತಿರುವ ಈ ಸಂದರ್ಭ ಚುನಾವಣೆಗೆ ಪಕ್ವವಾದ ಕಾಲ. ಆದರೆ, ಕೋಮುವಾದಿಗಳು ಮತ್ತು ಸರ್ವಾಧಿಕಾರಿ ಧೋರಣೆಯ ವರು ಅಧಿಕಾರಕ್ಕೆ ಬರದಂತೆ ಎಚ್ಚರ ವಹಿಸಬೇಕು ಎಂದರು.

ನಿಘಂಟು ತಜ್ಞ ಪ್ರೊ.ಜಿ. ವೆಂಕಟ ಸುಬ್ಬಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಾಜಶೇಖರನ್ ತಮ್ಮ ರಾಜಕೀಯ ಜೀವನದ ಆರಂಭದ ದಿನಗಳು ಮತ್ತು ಈಗಿನ ನಡುವೆ ಕಾಣುತ್ತಿರುವ ವ್ಯತ್ಯಾಸದ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಗಿರಿಜಾ ರಾಜಶೇಖರನ್ ಮತ್ತು ಭಾರತಿ ಕುಲದೀಪ್ ನಯ್ಯರ್ ವೇದಿಕೆಯಲ್ಲಿದ್ದರು.

`ಪಾಕಿಸ್ತಾನ ಅಸ್ತಿತ್ವದಲ್ಲಿರಬೇಕು~
`ಪಾಕಿಸ್ತಾನ ವಿಫಲ ಅಥವಾ ವೈಫಲ್ಯದ ಹಾದಿಯಲ್ಲಿರುವ ರಾಷ್ಟ್ರ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದರೆ, ಭಾರತದ ದೃಷ್ಟಿಯಿಂದ ಪಾಕಿಸ್ತಾನದ ಅಸ್ತಿತ್ವ ಬಹುಮುಖ್ಯವಾದುದು. ಅದು ಮರೆಯಾಗಬಾರದು~ ಎಂದು ಕುಲದೀಪ್ ನಯ್ಯರ್ ಅಭಿಪ್ರಾಯಪಟ್ಟರು.

`ತಾಲಿಬಾನ್ ಮತ್ತು ಭಾರತದ ನಡುವೆ ಅಡ್ಡಗೋಡೆಯಂತೆ ಪಾಕಿಸ್ತಾನ ಇದೆ. ಆ ದೇಶ ಅಸ್ತಿತ್ವ ಕಳೆದುಕೊಂಡರೆ ತಾಲಿಬಾನಿಗಳ ನೇರ ಗುರಿ ಭಾರತವೇ ಆಗುತ್ತದೆ. ಈ ದಿಸೆಯಿಂದ ಪಾಕಿಸ್ತಾನದ ಅಸ್ತಿತ್ವ ಬಹಳ ಮುಖ್ಯವಾಗುತ್ತದೆ. ಈ ಅಭಿಪ್ರಾಯಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕೂಡ ಸಹಮತ ವ್ಯಕ್ತಪಡಿಸಿದ್ದರು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT