ನವದೆಹಲಿ (ಪಿಟಿಐ): ಹಣದುಬ್ಬರ ಸೂಚ್ಯಂಕ ಆಧರಿಸಿದ ಬಾಂಡ್ ಬಿಡುಗಡೆಗೆ ಸಂಬಂಧಿಸಿದಂತೆ ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿಯ (ಎಫ್ಎಸ್ಡಿಸಿ)ಉಪ ಸಮಿತಿ ಗುರುವಾರ ಮುಂಬೈನಲ್ಲಿ ಸಭೆ ಸೇರಿ ಚರ್ಚೆ ನಡೆಸಲಿದೆ.
ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ 2013-14ನೇ ಸಾಲಿನ ಬಜೆಟ್ನಲ್ಲಿ ಹಣದುಬ್ಬರ ಆಧರಿಸಿದ ರಾಷ್ಟ್ರೀಯ ಸಾಲಪತ್ರ ಪ್ರಕಟಿಸಿದ್ದರು.
ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ), ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ ಡಿಎ), ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ಆರ್ಡಿಎ) ನೀಡುವ ಸಲಹೆಗಳನ್ನು ಆಧರಿಸಿ ಹಣಕಾಸು ಸಚಿವಾಲಯ ಸಾಲಪತ್ರದ ಅಂತಿಮ ರೂಪುರೇಷೆ ಸಿದ್ಧಪಡಿಸಲಿದೆ.
`ಆರ್ಬಿಐ' ಗವರ್ನರ್ ಡಿ. ಸುಬ್ಬರಾವ್ ಅಧ್ಯಕ್ಷತೆಯಲ್ಲಿನ `ಎಫ್ಎಸ್ಡಿಸಿ' ಉಪಸಮಿತಿ, ಹಣಕಾಸು ವಲಯದ ಅಭಿವೃದ್ಧಿ, ಆಂತರಿಕ ಸಮಸ್ಯೆಗಳು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಿದೆ.