ಕೋಲ್ಕತ್ತ (ಪಿಟಿಐ): ವಾರ್ಷಿಕ ಹಣದುಬ್ಬರ ದರ ಮಾರ್ಚ್ ವೇಳೆಗೆ ಶೇಕಡ 7ಕ್ಕೆ ಇಳಿಯಲಿದೆ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಹೇಳಿದ್ದಾರೆ.
‘ಹಣದುಬ್ಬರ ಏರಿಕೆ ಅತ್ಯಂತ ಗಂಭೀರ ಸಮಸ್ಯೆಯಾಗಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಸರ್ಕಾರ ಈ ಕುರಿತು ತೀವ್ರ ನಿಗಾ ವಹಿಸುತ್ತಿದೆ’ ಎಂದು ಅವರು ಇಲ್ಲಿ ಭಾರತೀಯ ವಾಣಿಜ್ಯೋದ್ಯಮ ಸಂಘ ಆಯೋಜಿಸಿದ್ದ ಸಭೆಯಲ್ಲಿ ಅಭಿಪ್ರಾಯಪಟ್ಟರು.
ಈರುಳ್ಳಿ ಮತ್ತು ಹಣ್ಣುಗಳ ಬೆಲೆ ಗಗನಕ್ಕೆ ಏರಿರುವುದರಿಂದ ಆಹಾರ ಹಣದುಬ್ಬರ ಮೇಲ್ಮುಖ ಚಲನೆಯಲ್ಲಿದೆ. ಹೊಸ ಫಸಲು ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದಂತೆ ಬೆಲೆ ಇಳಿಕೆ ಕಾಣಲಿದೆ. ಸದ್ಯ ಭಾರತ ಮಾತ್ರವಲ್ಲ, ಪ್ರವರ್ಧಮಾನಕ್ಕೆ ಬರುತ್ತಿರುವ ಜಗತ್ತಿನ ಇತರೆ ಮಾರುಕಟ್ಟೆಗಳೂ ಬೆಲೆ ಏರಿಕೆಯ ಬಿಸಿ ಅನುಭವಿಸುತ್ತಿವೆ ಎಂದರು.
‘ಆಮದಿನ ಮೂಲಕ ಪೂರೈಕೆ ಕೊರತೆ ನೀಗಿಸಬಹುದು. ಆದರೆ, ತರಕಾರಿಗಳನ್ನು ಆಮದು ಮಾಡಿಕೊಳ್ಳುವುದು ದುಬಾರಿ’ ಎಂದರು. ಜನವರಿ 22ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಆಹಾರ ಹಣದುಬ್ಬರ ದರ ಶೇ 17.05ರಷ್ಟಾಗಿದೆ.