ಕೊನೆಗೂ ಮಹಾ ಫಲಿತಾಂಶ ಹೊರಬಿದ್ದಿದೆ. ಭಾರತದ ಚುಕ್ಕಾಣಿಯನ್ನು ಮುಂದಿನ ಐದು ವರ್ಷಗಳಿಗೆ ಯಾರು ಹಿಡಿಯಬೇಕು ಎಂಬ ಪ್ರಶ್ನೆಗೆ ಮತದಾರ ನಿಖರವಾಗಿಯೇ ಉತ್ತರಿಸಿದ್ದಾನೆ. ಭಾರತದಿಂದ ಏಳುಸಾವಿರ ಮೈಲುಗಳಾಚೆ ಸಿನ್ಸಿನಾಟಿಯಲ್ಲಿ ಕೂತು, ಅಪರಾತ್ರಿಯಲ್ಲಿ ಫಲಿತಾಂಶದ ಅಂಕಿ ಸಂಖ್ಯೆಗಳತ್ತ ಕಣ್ಣರಳಿಸಿ ನೋಡುತ್ತಾ ಯಾರೆಲ್ಲಾ ಗೆದ್ದವರು, ಸೋತವರು ಯಾರು ಎಂದು ಲೆಕ್ಕಹಾಕುತ್ತಿರುವ ಈ ಸಂದರ್ಭದಲ್ಲಿ ಕೆಲವು ಪ್ರಶ್ನೆಗಳು ಪುಟಿಯುತ್ತಿವೆ. ಇದು ಭಾಜಪದ ಗೆಲುವೋ ಮೋದಿಯದೋ? ಎಷ್ಟೆಲ್ಲಾ ಮೂದಲಿಕೆ, ಆರೋಪಗಳ ಕೂರಂಬುಗಳನ್ನು ಸಹಿಸಿಯೂ ಮೋದಿ ಈ ಭರ್ಜರಿ ಯಶಸ್ಸನ್ನು ಗಳಿಸಿದ್ದು ಹೇಗೆ? ಮೋದಿ ಗೆಲುವಿನೊಂದಿಗೆ ವಿಶ್ವಾಸಾರ್ಹತೆ ಕಳೆದುಕೊಂಡದ್ದು ಯಾರು? ಅಷ್ಟಕ್ಕೂ ಮತದಾರನಿಗೆ ಈ ಚುನಾವಣೆಯಲ್ಲಿ ಮುಖ್ಯವೆನಿಸಿದ್ದು ಏನು ಎಂಬ ಪ್ರಶ್ನೆಗಳು ಎದುರು ಬಂದು ನಿಲ್ಲುತ್ತಿವೆ.
ಕಳೆದ ತಿಂಗಳೊಪ್ಪತ್ತಿನ ಈ ಚುನಾವಣಾ ಪ್ರಕ್ರಿಯೆಯನ್ನು ನೋಡುವಾಗ 2012ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ನೆನಪುಗಳು ಮರುಕಳಿಸುತ್ತಿದ್ದವು. ಕಾರಣ, ಭಾರತದ ಸಂಸದೀಯ ಮಾದರಿಯ ಚುನಾವಣೆ ಅಧ್ಯಕ್ಷೀಯ ಮಾದರಿಯ ಚುನಾವಣೆಯಂತೆ ಭಾಸವಾಗಿದ್ದು. ಮೊದಲಿಗೆ ’ಮೋದಿ ವರ್ಸಸ್ ರಾಹುಲ್’ ಎಂಬಂತೆ ಬಿಂಬಿತವಾದ ಚುನಾವಣೆ ಬರಬರುತ್ತಾ ‘ಮೋದಿ ವರ್ಸಸ್ ಅದರ್ಸ್’ ಎಂಬ ರೂಪ ತಾಳಿತು. ಅದಕ್ಕೆ ರಾಹುಲ್ ಗಾಂಧಿ, ಮೋದಿ ವಿರುದ್ಧ ಏಕಾಂಗಿಯಾಗಿ ಪೈಪೋಟಿಗೆ ನಿಲ್ಲಲು ಅಶಕ್ತರಂತೆ ಕಂಡದ್ದು ಕಾರಣ. ದೇಶದ ಪ್ರಜಾಪ್ರಭುತ್ವ ಎಷ್ಟು ಮಾಗಿದೆ ಎಂಬುದಕ್ಕೆ ಚುನಾವಣೆ ಮಾನದಂಡವಾಗುತ್ತದೆ. ಜಾತಿ, ಹಣಬಲ ಮುಖ್ಯವಾಗುವ ಭಾರತದ ಚುನಾವಣೆಗೂ ಸಾಮರ್ಥ್ಯ, ನಿಲುವುಗಳ ತುಲನೆಯಲ್ಲಿ ನಡೆಯುವ ಅಮೆರಿಕದ ಚುನಾವಣೆಗೂ ಅಜಗಜಾಂತರ. ಆದರೂ ಸಾಮ್ಯ ಎನಿಸಿದ್ದು ವ್ಯಕ್ತಿ ಕೇಂದ್ರಿತವಾಗಿ, ವಾಕ್ಚಾತುರ್ಯ ನಿರ್ಣಾಯಕ ಎನಿಸಿದ್ದರಿಂದ ಮಾತ್ರ.
ಬಹುಶಃ ಮನಮೋಹನ್ ಸಿಂಗ್ರ ಹತ್ತುವರ್ಷಗಳ ಗಾಢಮೌನ ಮಾತಿನ ಮಹತ್ವ ಹೆಚ್ಚಿಸಿತ್ತು. ಹಾಗಾಗಿಯೇ ಚುನಾವಣೆಯುದ್ದಕ್ಕೂ ಮೌನದ ಮೇಲೆ ಮಾತು ಸವಾರಿ ಮಾಡಿತು. ಮೋದಿ ಮಾತುಗಾರಿಕೆಯ ಓಘ ಅಡ್ವಾಣಿಯವರನ್ನು ಮಂಕು ಮಾಡಿತು. ಹಜಾರೆ ಮೌನವನ್ನು ಒತ್ತರಿಸಿಕೊಂಡು ಕೇಜ್ರಿವಾಲರ ಮಾತು ಮುನ್ನೆಲೆಗೆ ಬಂತು. ಮನಮೋಹನ್ ಸಿಂಗರ ಮೌನ, ರಾಹುಲ್ ಸಂವಹನ ಕೊರತೆಯಿಂದ ಸೊರಗಿದ್ದ ಕಾಂಗ್ರೆಸ್ಸಿಗೆ ಕೊಂಚವಾದರೂ ಜೀವತುಂಬಲು ಪ್ರಿಯಾಂಕ ಗಾಂಧಿ ಭಾಷಣಕ್ಕೆ ನಿಲ್ಲಬೇಕಾಯಿತು. ‘Political language is designed to make lies sound truthful and murder respectful’ ಎಂಬ ಜಾರ್ಜ್ ಆರ್ವೆಲ್ ಮಾತಿನಂತೆ ಪ್ರಚಾರ ಸಭೆಯ ವೇದಿಕೆಯಿಂದ ಸುಳ್ಳುಗಳು ಸತ್ಯದ ಮುಖವಾಡದಲ್ಲಿ ಜನರೆದುರು ಧುಮುಕಿದವು. ವಿಪರೀತ ಮಾತು ಎಲ್ಲೆ ಮೀರಿದ್ದೂ ಹೌದು. ವೇದಿಕೆಯಲ್ಲಿ ಆರ್ಭಟಿಸಿದವರು ಅರಿವಿಲ್ಲದೆ ಪ್ರಜಾಪ್ರಭುತ್ವದ ಘನತೆಯನ್ನು ಜಗ್ಗುತ್ತಿದ್ದರು.
ಈ ಚುನಾವಣೆಯ ಬಗ್ಗೆ ಎಲ್ಲಿಲ್ಲದ ನಿರೀಕ್ಷೆಗಳು ಬೆಳೆದದ್ದು ಏಕೆ? ಮೊದಲನೆಯದು ಹತ್ತುವರ್ಷಗಳಿಂದ ದೇಶವನ್ನಾಳಿದ ಯುಪಿಎ ಸರ್ಕಾರದ ಆಡಳಿತ ವೈಫಲ್ಯ ಮತ್ತು ಬಹಿರಂಗವಾದ ಹಗರಣಗಳು. ಎರಡನೆಯದು, ಅಣ್ಣಾ ಹಜಾರೆ ನೇತೃತ್ವದಲ್ಲಿ ಜನಲೋಕಪಾಲ್ ಕಾಯಿದೆಗಾಗಿ ಆರಂಭವಾದ ಸತ್ಯಾಗ್ರಹ ಮತ್ತು ಅದರಿಂದ ಟಿಸಿಲೊಡೆದ ಭ್ರಷ್ಟಾಚಾರ ವಿರುದ್ಧದ ಜನಾಕ್ರೋಶ. ಆದರೆ ಚುನಾವಣೆಯ ದಿನಾಂಕ ಘೋಷಣೆಯಾಗುವ ಮೊದಲೇ ಗಾಂಧಿ ಮೌಲ್ಯಗಳ ಪ್ರತಿನಿಧಿಯಂತಿದ್ದ ಹಜಾರೆ ಮೂಲೆಗುಂಪಾಗಿ, ಆ ಆಂದೋಲನವೇ ಅಪ್ರಸ್ತುತವಾದದ್ದು ಭಾರತದ ರಾಜಕಾರಣ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದರ ಸಂಕೇತ. ಅದರಿಂದಲೇ ಕುಡಿಯೊಡೆದು ಮೊದಲಿಗೆ ‘ಭರವಸೆ’ ಎನಿಸಿದ್ದ ಕೇಜ್ರೀವಾಲರ ಹೊಸಪಕ್ಷ ತನ್ನ ಅಪಕ್ವ ನಡವಳಿಕೆಗಳಿಂದಲೇ ‘ಭ್ರಮೆ’ ಎಂಬುದನ್ನು ಮನವರಿಕೆ ಮಾಡಿದ್ದು ವಿಪರ್ಯಾಸ.
ಈ ಫಲಿತಾಂಶವನ್ನು ನೋಡುವಾಗ ಮೋದಿ ಮಾತ್ರ ಎದ್ದು ಕಾಣುತ್ತಿದ್ದಾರೆ. ಭಾಜಪದ ಬಳಿಯಿದ್ದ ಮೋದಿ ಎಂಬ ಏಕೈಕ ಬ್ರಹ್ಮಾಸ್ತ್ರ ಗುರಿತಲುಪಿದೆ. ಬಹುತೇಕ ಭಾಜಪದ ಅಭ್ಯರ್ಥಿಗಳು ಮೋದಿ ಮುಖವಾಡದಿಂದಲೇ ಗೆದ್ದಿದ್ದಾರೆ. ಮೋದಿ ಈ ಪರಿ ದೇಶದೆಲ್ಲೆಡೆ ಜನರ ಮನಗೆದ್ದದ್ದು ಹೇಗೆ? ಮೋದಿ ಮೆಟ್ಟಿನಿಂತ ಸವಾಲುಗಳೇನು ಸಾಮಾನ್ಯದ್ದಲ್ಲ : ಗೋಧ್ರಾ ಗಲಭೆಯ ಭೂತವಂತೂ ಬೆಂಬಿಡದೆ ಕಾಡಿತು. ಮಾಧ್ಯಮಗಳೂ ಮೋದಿ ಬೆನ್ನುಬಿದ್ದವು. ಹತ್ತುವರ್ಷಗಳಲ್ಲಿ ಯುಪಿಎ ಸರ್ಕಾರ ತನ್ನೆಲ್ಲಾ ತನಿಖಾ ಸಂಸ್ಥೆಗಳಿಂದ ವಿಚಾರಣೆ ನಡೆಸಿದರೂ, ಸುಪ್ರಿಂಕೋರ್ಟ್ ಖುದ್ದು ಪರಿಶೀಲಿಸಿದರೂ ಮೋದಿ ಪಾತ್ರ ಗೋಧ್ರಾ ಘಟನೆಯಲ್ಲಿ ಸಾಬೀತಾಗಲಿಲ್ಲ. ಆದರೆ ಆರೋಪಗಳು ಸಾಯಲಿಲ್ಲ.
ಮೋದಿ ಮಾತ್ರ ದೃಷ್ಟಿ ಕದಲಿಸದೆ ಅಭಿವೃದ್ಧಿ ಎಂಬ ಇಂಬು ಹಿಡಿದು ಗುಜರಾತಿನಿಂದ ದೆಹಲಿ ಗದ್ದುಗೆಯತ್ತ ಏರುತ್ತಲೇ ಹೋದರು, ಪ್ರತಿಪಕ್ಷಗಳು ಗುಜರಾತ್ ಅಭಿವೃದ್ಧಿಯನ್ನು ನಿರಾಕರಿಸಲಿಲ್ಲ, ‘ಗೋಧ್ರಾ ಘಟನೆ’ ಎಂಬ ಮೊಂಡಾದ ಆಯುಧವನ್ನೇ ಪದೇ ಪದೇ ಬಳಸುತ್ತಾ ಮೋದಿಗೆ ಉಪಕಾರವನ್ನೇ ಮಾಡಿದವು. ಮತದಾರನಿಗೆ ಆಧಾರ ರಹಿತ ‘ಭೂತ’ಕ್ಕಿಂತ, ಮೋದಿ ಪುನರುಚ್ಚರಿಸುತ್ತಾ ಬಂದ ಪ್ರಗತಿ, ಸುರಾಜ್ಯ, ‘ಗುಜರಾತ್ ಮಾದರಿ’ ಎಂಬ ಭವಿಷ್ಯದ ಭರವಸೆಯಷ್ಟೇ ಮುಖ್ಯವಾಗಿರುವುದು ಫಲಿತಾಂಶದಲ್ಲಿ ಗೋಚರಿಸುತ್ತಿದೆ.
ಜೊತೆಗೆ ಮತದಾರನ ತೀರ್ಪಿನಿಂದ ಇದುವರೆಗೂ ಮೋದಿಯವರನ್ನು ದೂಷಿಸುತ್ತಲೇ ಬಂದ ಮಾಧ್ಯಮಗಳು ಮತ್ತು ಬುದ್ಧಿಜೀವಿವರ್ಗ ತಮ್ಮ ವಿಶ್ವಾಸಾರ್ಹತೆ ಕಳೆದುಕೊಂಡಿವೆ. ಮೋದಿ ಮೋಡಿಯನ್ನು ಇನ್ನಾದರೂ ಒಪ್ಪಿಬಿಡಿ ಎಂಬ ಸಂದೇಶ ಫಲಿತಾಂಶದಿಂದ ರವಾನೆಯಾಗಿದೆ. ಇನ್ನು ಫಲಿತಾಂಶದ ಹೊರತಾಗಿ ಈ ಸಮಯದಲ್ಲಿ ಸೋಜಿಗ ಎನಿಸುವ ಮತ್ತೊಂದು ಸಂಗತಿಯೆಂದರೆ ಷೇರು ಮಾರುಕಟ್ಟೆಯ ವರ್ತನೆ. ವಿತ್ತ ಸಚಿವರಾಗಿ ಭಾರತದ ಆರ್ಥಿಕ ಸದೃಢತೆಗೆ ಭಾಷ್ಯ ಬರೆದ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಕನಿಷ್ಠ ಮಟ್ಟಕ್ಕೆ ಇಳಿದಿದ್ದ ಷೇರು ವಹಿವಾಟು ಅವರು ಪ್ರಧಾನಿ ಕಾರ್ಯಾಲಯದಿಂದ ಹೊರನಡೆಯುತ್ತಿರುವ ಈ ಹೊತ್ತಿನಲ್ಲಿ ಅವರನ್ನು ಅಣುಕಿಸಲೋ ಎಂಬಂತೆ ಜಿಗಿಯುತ್ತಿದೆ! ಪ್ರತಿಷ್ಠಿತ ಪದವಿಗಳನ್ನು ಹೊಂದಿದ ಪ್ರಧಾನಿಯ ಕಾಲದಲ್ಲಿ ಕಳೆಗುಂದಿದ್ದ ಮಾರುಕಟ್ಟೆ ಗುಜರಾತಿನ ಕುಶಲಮತಿ ‘ಚಾಯ್ ವಾಲ’ ಗದ್ದುಗೆಗೆ ಬರುವ ಸೂಚನೆ ಸಿಕ್ಕಿದ್ದೇ ಲವಲವಿಕೆ ಪಡೆದುಕೊಂಡಿದೆ. ಮತದಾರನ ಮನದಿಂಗಿತ ಇವಿಎಂಗಳಲ್ಲಿ ಮಾತ್ರವಲ್ಲ ಮಾರುಕಟ್ಟೆಯ ವರ್ತನೆಯಲ್ಲೂ ಪ್ರತಿಫಲಿಸಿದೆ.
ಒಟ್ಟಿನಲ್ಲಿ ಫಲಿತಾಂಶ ಸ್ಥಿರ ಸರ್ಕಾರದ ರಚನೆಗೆ ಪೂರಕವಾಗಿರುವುದು ಆಡಳಿತದ ದೃಷ್ಟಿಯಿಂದ ಒಳ್ಳೆಯದೇ. ಆದರೆ ಈ ಕ್ಷಣದ ಪ್ರಶ್ನೆಯೆಂದರೆ ಹತಾಶ ವಾತಾವರಣದಲ್ಲಿ ಭರವಸೆ, ಕನಸುಗಳನ್ನು ಬಿತ್ತಿ ಮತದಾರರ ಮನಗೆದ್ದ ಮೋದಿ, ನಿರೀಕ್ಷೆಯ ಬೆಟ್ಟವನ್ನು ಹೊರಬಲ್ಲರೇ ಎಂಬುದು. ರಿಸರ್ವ್ ಬ್ಯಾಂಕ್ ಗೌರ್ನರ್ ಈಗಾಗಲೇ ಮಂದಗತಿಯ ಪ್ರಗತಿ, ವಿತ್ತೀಯ ಕೊರತೆ, ಹಣದುಬ್ಬರದ ಸವಾಲು ಮುಂದಿನ ಸರ್ಕಾರಕ್ಕಿದೆ ಎಂದು ಎಚ್ಚರಿಸಿದ್ದಾರೆ. ಆರ್ಥಿಕ ಹಿಂಜರಿತವನ್ನು ನಿಭಾಯಿಸುವ ಜೊತೆಗೆ ಮೋದಿ ‘ಗುಜರಾತ್ ಅಭಿವೃದ್ಧಿ’ಯ ಛಾಪನ್ನು ಇಡೀ ದೇಶಕ್ಕೆ ಹೇಗೆ ವಿಸ್ತರಿಸುತ್ತಾರೆ? ಭದ್ರತೆ, ಬಡತನ, ನಿರುದ್ಯೋಗ ಸಮಸ್ಯೆಗೆ ಯಾವ ಉತ್ತರ ಹುಡುಕುತ್ತಾರೆ? ಗಗನಕ್ಕೇರಿರುವ ಅಗತ್ಯ ವಸ್ತುಗಳನ್ನು ಭೂಸ್ಪರ್ಶ ಮಾಡಿಸಲು ಏನೆಲ್ಲಾ ಕ್ರಮ ಕೈಗೊಳ್ಳುತ್ತಾರೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಪ್ರಧಾನಿಯಾದ ಬಳಿಕ ‘ನಾನು ಮೋದಿ’ ಎಂಬುದನ್ನು ಮೋದಿ ಮತ್ತೊಮ್ಮೆ ನಿರೂಪಿಸಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.