ಕೊಲ್ಲಂ (ಪಿಟಿಐ): ಕೇರಳ ಕಡಲ ತೀರದಲ್ಲಿ ಇಬ್ಬರು ಭಾರತೀಯ ಮೀನುಗಾರರನ್ನು ಗುಂಡಿಟ್ಟು ಹತ್ಯೆ ಮಾಡಿದ ಆರೋಪದ ಮೇಲೆ ಬಂಧಿತರಾಗಿರುವ ಇಟಲಿ ನೌಕಾ ಪಡೆಯು ಇಬ್ಬರು ಸಿಬ್ಬಂದಿಯನ್ನು ಕರುನಾಗಪಳ್ಳಿಯ ಮ್ಯಾಜಿಸ್ಟ್ರೇಟ್ ಕೋರ್ಟ್ 3 ದಿನಗಳ ವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿದೆ.
ನ್ಯಾಯಾಧೀಶ ಕೆ.ಪಿ. ಜಾಯ್ ಅವರ ಮುಂದೆ ಆರೋಪಿಗಳನ್ನು ಸೋಮವಾರ ಹಾಜರು ಪಡಿಸ ಲಾಯಿತು.
ನ್ಯಾಯಾಧೀಶರು ಮಾರ್ಚ್ 5ರವರೆಗೆ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರೂ ಪೊಲೀಸರು ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಮಾಡಿಕೊಂಡ ಮನವಿಯನ್ನು ಪುರಸ್ಕರಿಸಿ ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲು ಸಮ್ಮತಿಸಿದರು.
ಮಹಾಶಿವರಾತ್ರಿ ನಿಮಿತ್ತ ಕೋರ್ಟ್ಗೆ ರಜೆ ಇದ್ದ ಕಾರಣ ಆರೋಪಿಗಳಾದ ಲ್ಯಾಟೊರ್ ಮ್ಯಾಸಿಮಿಲಿಯಾನೊ ಮತ್ತು ಸಲ್ವಟೋರ್ ಗಿರೊನೆ ಅವರನ್ನು ನ್ಯಾಯಾಧೀಶರ ಮನೆಗೆ ಹಾಜರು ಪಡಿಸಲಾಯಿತು. ಇವರಿಬ್ಬರನ್ನು ಪೊಲೀಸರು ಭಾನುವಾರ ಬಂಧಿಸಿದ್ದರು