ಪೀಣ್ಯ ದಾಸರಹಳ್ಳಿ: ರಸ್ತೆಯುದ್ದಕ್ಕೂ ಎದ್ದು ಕಾಣುವ ಗುಂಡಿಗಳು. ಡಾಂಬರು ಕಾಣದೇ ವರ್ಷಗಳೇ ಕಳೆದಿವೆ. ಇದು ಮಾಗಡಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ದಾಸರಹಳ್ಳಿ ರಸ್ತೆಯ ಕತೆ.
ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸವಾರರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಮಳೆ ಬಂದರೆ ಈ ರಸ್ತೆಯ ಪರಿಸ್ಥಿತಿ ಹೇಳಲು ಅಸಾಧ್ಯ.
ರಸ್ತೆಯ ದುರಾವಸ್ಥೆಯ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ ಎಂದು ನಿವಾಸಿಯೊಬ್ಬರು ದೂರಿದರು. ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಒದಗಿಸಲು ಜನಪ್ರತಿನಿಧಿಗಳಿಗೆ ಬದ್ಧತೆಯಿಲ್ಲ. ಮತ ಕೇಳಲು ಮಾತ್ರ ಬರುತ್ತಾರೆ ಎಂದು ಆಕ್ಷೇಪಿಸಿದರು.
ರುಕ್ಮಿಣಿ ನಗರ, ನೆಲಗದರನಹಳ್ಳಿ, ಎಚ್ಎಂಟಿ ಲೇ ಔಟ್, ಇಂದಿರಾ ನಗರ, ತಿಗಳರ ಪಾಳ್ಯ, ಪೀಣ್ಯ ಎರಡನೇ ಹಂತ, ಬ್ಯಾಡರಹಳ್ಳಿ, ಹೇರೋಹಳ್ಳಿ, ಕಾಚೋಹಳ್ಳಿ ಮತ್ತಿತರರ ಗ್ರಾಮಸ್ಥರು ಈ ಮುಖ್ಯ ಸಂಪರ್ಕ ರಸ್ತೆಯಲ್ಲಿ ಚಲಿಸುತ್ತಾರೆ. ಆದ್ದರಿಂದ ಈ ರಸ್ತೆಯನ್ನು ದುರಸ್ಥಿಗೊಳಿಸಲು ಸರ್ಕಾರ ಮುಂದಾಗಬೇಕಾಗಿದೆ.