ಇಲ್ಲಿಂದ ಆ ಕಡೆಯ ಗ್ರಾಮಗಳಿಗೆ ಮುಖ್ಯವಾಗಿ ಪ್ರತಾಪುರ- ಮಹಮ್ಮದಾಪುರ, ಜಾಜನಮುಗಳಿ- ಶಿರಸಿ ಮತ್ತು ಮಿರಖಲ್- ಶಹಾಜಹಾನಿ ಔರಾದ್ ಎಂಬ ಮೂರು ಮಾರ್ಗಗಳಲ್ಲಿ ವಾಹನಗಳು ಸಂಚರಿಸುತ್ತವೆ. ಆದರೆ ಇವು ತೀರ ಹದಗೆಟ್ಟಿದ್ದರಿಂದ ಸಂಚಾರ ಸಮಸ್ಯೆಯಾಗಿದೆ.
ಪ್ರತಾಪುರ ಮತ್ತು ಹುಲಸೂರ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಜನರು ಹೆಚ್ಚಾಗಿ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಮಹಾರಾಷ್ಟ್ರದ ಲಾತೂರ್, ನಿಲಂಗಾದ ಮಾರುಕಟ್ಟೆಗಳನ್ನು ಅವಲಂಬಿಸಿದ್ದಾರೆ. ಅಲ್ಲಿ ಇಲ್ಲಿನಕ್ಕಿಂತ ಹೆಚ್ಚಿನ ಬೆಲೆ ದೊರೆಯುವ ಕಾರಣ ಕೃಷಿ ಉತ್ಪನ್ನಗಳನ್ನು ಅಲ್ಲಿಗೆ ಒಯ್ದು ಮಾರಾಟ ಮಾಡುತ್ತಾರೆ.
ಈಭಾಗದ ಅನೇಕ ಕುಟುಂಬಗಳು ಆ ಕಡೆಯ ಜನರೊಂದಿಗೆ ನಂಟು ಹೊಂದಿದ್ದಾರೆ. ಇದರಿಂದಾಗಿ ಅಲ್ಲಿಗೆ ಹೋಗಿ ಬರುವ ಸಂದರ್ಭಗಳೂ ಹೆಚ್ಚಾಗಿರುತ್ತವೆ.
ಆದರೆ ರಸ್ತೆಗಳ ಸ್ಥಿತಿ ಹದಗೆಟ್ಟು ಡಾಂಬರು ಕಿತ್ತುಕೊಂಡು ಹೋಗಿದ್ದರಿಂದ ಬಸ್, ಜೀಪ್ ಮತ್ತು ದ್ವಿಚಕ್ರ ವಾಹನ ಸಹ ತೆಗೆದುಕೊಂಡು ಹೋಗಲು ಆಗುತ್ತಿಲ್ಲ ಎಂದು ಘೋಟಾಳದ ಗುರಣ್ಣ ಜಮಾದಾರ ಅಳಲು ತೋಡಿಕೊಳ್ಳುತ್ತಾರೆ.
ಈಚೆಗೆ ಈ ರಸ್ತೆಗಳ ದುರಸ್ತಿಗೆ ಹಣ ಮಂಜೂರಾಗಿದೆ. ಆದರೂ ಮಿರಖಲ್ ರಸ್ತೆಯ ಕಾಮಗಾರಿ ಬಿಟ್ಟರೆ ಬೇರೆ ರಸ್ತೆಗಳಲ್ಲಿ ಕೆಲಸ ನಡೆಯುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.