ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ರಸ್ತೆಯಲ್ಲಿ ಸವಾರರು ಹೈರಾಣ

Last Updated 9 ಡಿಸೆಂಬರ್ 2013, 8:29 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ಹೊರವಲಯದ ಅಂಚಿನಲ್ಲಿರುವ ಸಂಪರ್ಕ ರಸ್ತೆಯೊಂದು ಸಂಪೂರ್ಣ ಹಾಳಾಗಿದ್ದು, ಇದರಿಂದ ಇಲ್ಲಿ ಸಂಚರಿಸುವ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಗಿದೆ.

ನಗರದಿಂದ ಸುಮಾರು 5 ಕಿ.ಮೀ. ದೂರದಲ್ಲಿರುವ ಈ ರಸ್ತೆಯು ಕಾರವಾರ ತಾಲ್ಲೂಕಿನ ಸದಾಶಿವಗಡಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆಯು ಕಳೆದೆರಡು ವರ್ಷಗಳಿಂದ ಹದಗೆಟ್ಟಿದ್ದು, ಅಲ್ಲಲ್ಲಿ ಹೊಂಡಗಳಾಗಿವೆ. ಮಳೆಗಾಲದಲ್ಲಿ ಈ ರಸ್ತೆ ಕೊಚ್ಚೆಗುಂಡಿಯಾಗಿ ಪರಿವರ್ತನೆಯಾಗುತ್ತದೆ.

ಈ ರಸ್ತೆ ಮಾರ್ಗವಾಗಿ ನಿತ್ಯ ನೂರಾರು ಸಾರಿಗೆ ಬಸ್‌ಗಳು, ಕಾರುಗಳು, ದ್ವಿಚಕ್ರ ವಾಹನಗಳು ಸಂಚರಿಸುತ್ತವೆ. ಬೆಳಗಾವಿ, ಪುಣೆ, ವಿಜಾಪುರ, ಮಲ್ಲಾಪುರ, ಕೈಗಾಕ್ಕೆ ಈ ಮಾರ್ಗವಾಗಿಯೇ ಹೋಗಬೇಕು. ಆದರೆ, ಹದಗೆಟ್ಟ ರಸ್ತೆಯಿಂದ ಇಲ್ಲಿ ಸಂಚರಿಸುವ ವಾಹನ ಸವಾರರು ಹೈರಾಣಾಗುತ್ತಿದ್ದಾರೆ.

ಇದರ ದುರಸ್ತಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಾರೆಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.

ಈ ರಸ್ತೆಯ ಸಮೀಪದಲ್ಲೆ ಶಾಲೆ, ಮಾರುಕಟ್ಟೆ ಹಾಗೂ ವಾಣಿಜ್ಯ ಮಳಿಗೆಗಳು ಇರುವುದರಿಂದ ಇಲ್ಲಿ ಸದಾ ಜನಸಂದಣಿಯಿಂದ ಕೂಡಿರುತ್ತದೆ. ಆದರೂ ಕೂಡ ಈ ರಸ್ತೆಯ ಅಭಿವೃದ್ಧಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನ ಹರಿಸಿಲ್ಲ.

ಸ್ವಚ್ಛತೆ, ಬೀದಿ ದೀಪದ ಕೊರತೆ:  ಹದಗೆಟ್ಟ ರಸ್ತೆಯ ಜೊತೆಗೆ ಇಲ್ಲಿ ಸ್ವಚ್ಛತೆ ಹಾಗೂ ಬೀದಿ ದೀಪದ ವ್ಯವಸ್ಥೆ ಕೂಡ ಸಮರ್ಪಕವಾಗಿಲ್ಲ. ರಸ್ತೆಯ ಬದಿಯಲ್ಲಿನ ಕಸದ ತೊಟ್ಟಿ ಸುತ್ತಮುತ್ತ ಕಸ ಚೆಲ್ಲಾಪಿಲ್ಲಿಯಾಗಿ ಹರಡಿರುತ್ತದೆ. ಈ ಮಾರ್ಗದಲ್ಲಿ ಬೀದಿ ದೀಪ ಕೂಡ ಹಾಳಾಗಿದ್ದು, ರಾತ್ರಿ ವೇಳೆ ಕತ್ತಲೆಯಲ್ಲಿ ಸಂಚರಿಸಬೇಕಾದ ದುಃಸ್ಥಿತಿ ಇದೆ.

ರಸ್ತೆ ದುರಸ್ತಿ ಮಾಡುವ ಸಂಬಂಧ ಚಿತ್ತಾಕುಲ ಗ್ರಾಮ ಪಂಚಾಯ್ತಿ ಅಧಿಕಾರಿಗಳನ್ನು ಕೇಳಿದರೆ ಈ ರಸ್ತೆ ಲೋಕೋಪಯೋಗಿ ಇಲಾಖೆ ಸೇರಿದ್ದು, ಹಾಗಾಗಿ ಅವರೇ ಈ ರಸ್ತೆಯ ಅಭಿವೃದ್ಧಿ ಮಾಡಬೇಕು ಎಂದು ಹಾರಿಕೆ ಉತ್ತರ ನೀಡುತ್ತಾರೆ.

‘ಕಳೆದ ವರ್ಷ ಈ ರಸ್ತೆಗೆ ಜಲ್ಲಿ ಪೌಡರ್‌ ಹಾಕಿ ತೇಪೆ ಹಾಕಲಾಗಿತ್ತು. ಆದರೆ, ಈ ಬಾರಿಯ ಮಳೆಗೆ ಅದು ಕೊಚ್ಚಿಕೊಂಡು ಹೋಗಿದೆ. ಹದಗೆಟ್ಟ ರಸ್ತೆಯಿಂದ ಇಲ್ಲಿ ಅಪಘಾತಗಳು ನಡೆದ ನಿದರ್ಶನಗಳಿವೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರಸ್ತೆಯನ್ನು ದುರಸ್ತಿಪಡಿಸಬೇಕು’ ಎಂದು ಸ್ಥಳೀಯರಾದ ಅಜಿತ್‌ ಪೊಕಳೆ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT