ಕುಶಾಲನಗರ: ಮಳೆಯಾಶ್ರಿತ ಪ್ರದೇಶದಲ್ಲಿ ಮುಂಗಾರುಪೂರ್ವ ಮಳೆ ಉತ್ತಮವಾಗಿರುವ ಹಿನ್ನೆಲೆಯಲ್ಲಿ ರೈತರು ಹರ್ಷಚಿತ್ತರಾಗಿದ್ದಾರೆ.
ಕಳೆದ 2-3 ದಿನಗಳ ಹಿಂದೆ ಬಿದ್ದ ವಾಡಿಕೆ ಮಳೆಯಿಂದ ರೈತರು ಬಿತ್ತನೆಗಾಗಿ ತಮ್ಮ ಜಮೀನನ್ನು ಉಳುಮೆ ಮಾಡಲಾರಂಭಿಸಿದ್ದಾರೆ.
ಬಹುತೇಕ ರೈತರು ಈಗಾಗಲೇ ಮೆಕ್ಕೆಜೋಳಕ್ಕಾಗಿ ಹೊಲವನ್ನು ಸಿದ್ಧಗೊಳಿಸಿರುವುದು ಕಂಡು ಬಂದಿದೆ.
ಹಾರಂಗಿ ನೀರಾವರಿ ಪ್ರದೇಶದಲ್ಲಿ ಶುಂಠಿ ಕೃಷಿ ಚಟುವಟಿಕೆಗಳೂ ಅಲ್ಲಲ್ಲಿ ಕಾಣುತ್ತಿದೆ.
ಜಿಲ್ಲೆಯ ದೊಡ್ಡ ಹೋಬಳಿಯೆನಿಸಿದ ಕುಶಾಲನಗರದಲ್ಲಿ ಮೆಕ್ಕೆಜೋಳದ ಕೃಷಿ ಪ್ರಮುಖ ಬೆಳೆಯಾಗಿದ್ದು, ಉಳಿದಂತೆ ಹಾರಂಗಿ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಬತ್ತವನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ.
ಈಚೆಗೆ ಬಿದ್ದ ಮಳೆಯಿಂದ ಹಾರಂಗಿ ಪ್ರದೇಶದಲ್ಲಿ ರೈತರು ಅಲಸಂದೆ, ಹೆಸರುಕಾಳು ಮತ್ತಿತರ ದ್ವಿದಳ ಧಾನ್ಯಗಳ ಬಿತ್ತನೆಯಲ್ಲಿ ತೊಡಗಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಈತನಕ ನಾಲ್ಕು ಬಾರಿ ಮಳೆ ಆಗಿರುವುದರಿಂದ ಮುಂಗಾರಿಗೂ ಮುನ್ನ ಕೈಗೊಳ್ಳಲಿರುವ ಕೃಷಿ ಚಟುವಟಿಕೆಗೆ ಉತ್ತಮ ಹದ ಸಿಕ್ಕಂತಾಗಿದೆ ಎಂದು ಬಸವನಹಳ್ಳಿಯ ಪ್ರಗತಿಪರ ರೈತ ಬಿ.ಎಸ್.ಧನಪಾಲ್ ಅಭಿಪ್ರಾಯಪಟ್ಟಿದ್ದಾರೆ.
ಮಳೆಯಾಶ್ರಿತ ಪ್ರದೇಶ ಸೇರಿದಂತೆ ನೀರಾವರಿ ಪ್ರದೇಶದಲ್ಲಿ ಕೆಲ ರೈತರು ತಂಬಾಕು (ಹೊಗೆಸೊಪ್ಪು) ಕೃಷಿಯಲ್ಲಿ ತೊಡಗಿರುವುದು ಕಂಡು ಬಂದಿದೆ.