ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನುಮ ಜಯಂತಿ: ವಿಶೇಷ ಪೂಜೆ

Last Updated 26 ಡಿಸೆಂಬರ್ 2012, 6:02 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನ ಪುರಾತನ ಪ್ರಸಿದ್ಧ ಆಲಂಬಗಿರಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಮಂಗಳವಾರ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಆಂಜನೇಯಸ್ವಾಮಿಗೆ ವಿಶೇಷವಾಗಿ ಪಂಚರಂಗಿ ಅಲಂಕಾರದ ಜೊತೆಗೆ ವಾಯು ಮಾಲಿನ್ಯ ನಿಯಂತ್ರಿಸುವ ಅಶ್ವತ್ಥವೃಕ್ಷ, ಬೇವು, ಹೊಂಗೆ, ತುಳಸಿ, ಬಿಲ್ವ ಮತ್ತು ಆಲದ ವೃಕ್ಷಗಳ ಎಲೆಗಳನ್ನು ಸಮರ್ಪಿಸಿಲಾಯಿತು. ವಾಯು ಮಾಲಿನ್ಯ ತಡೆಯುವ ವೃಕ್ಷಗಳು ಪ್ರಕೃತಿಯಲ್ಲಿ ಹೇರಳವಾಗಿ ಬೆಳೆದು ಸಕಲ ಜೀವರಾಶಿಗಳು ಸುಭಿಕ್ಷೆಯಿಂದ ಜೀವನ ಸಾಗಿಸುವಂತಾಗಲು ಭಕ್ತರು ಪ್ರಾರ್ಥನೆ ಸಲ್ಲಿಸಿದರು.

ಆಲಂಬಗಿರಿಯಲ್ಲಿ ಪ್ರತಿ ವರ್ಷವೂ ಒಂದೊಂದು ವಿಶೇಷ ಅಲಂಕಾರ ಮಾಡಿಕೊಂಡು ಬರುವುದು ರೂಢಿಯಲ್ಲಿದೆ. ಬೆಳಗಿನಿಂದಲೇ ಸುತ್ತಮುತ್ತಲಿನ ಗ್ರಾಮಸ್ಥರು ಹನುಮಜಯಂತಿ ಪ್ರಯುಕ್ತ ಕ್ಷೇತ್ರಕ್ಕೆ ಭೇಟಿ ನೀಡಿ ಹಣ್ಣು ಕಾಯಿ ಮಾಡಿಸುವ ದೃಶ್ಯ ಸಾಮಾನ್ಯವಾಗಿತ್ತು. ವಿಶೇಷವಾಗಿ 108 ವಡೆಗಳ ಹಾರವನ್ನು ಸಮರ್ಪಿಸಲಾಗಿತ್ತು. ದರ್ಶನಕ್ಕೆ ಬಂದ ಭಕ್ತರಿಗೆ ಯೋಗಿನಾರೇಯಣ ಮಠದ ವತಿಯಿಂದ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿತ್ತು.

ಹನುಮ ಜಯಂತಿ ಪ್ರಯುಕ್ತ ಸಂಗೀತ, ಸಂಕೀರ್ತನೆ ಏರ್ಪಡಿಸಲಾಗಿತ್ತು. ಆಲಂಬಗಿರಿ ಗ್ರಾಮಸ್ಥರು, ನಾಯಿಂದ್ರಹಳ್ಳಿ ಗ್ರಾಮಸ್ಥರು, ಬ್ರಾಹ್ಮಣರ ದಿನ್ನೆ ಗ್ರಾಮಸ್ಥರು ಮತ್ತು ಸುತ್ತ ಮುತ್ತಲಿನ ಗ್ರಾಮಸ್ಥರು ಬೆಳಗಿನಿಂದ ರಾತ್ರಿಯವರೆಗೂ ಭಜನೆ ಕಾರ್ಯಕ್ರಮನಡೆಯಿತು. ಭಕ್ತ ಸಮೂಹವು ವಿವಿಧ ಪೂಜಾ ಕಾರ್ಯಕ್ರಮಗಳಲ್ಲಿ  ಭಾಗವಹಿಸಿದ್ದರು. ರಾಮ- ಹನುಮರ ಸ್ಮರಣೆಯನ್ನು ಮಾಡಿ ಭಕ್ತಿಭಾವ ಮೆರೆದರು.

ವರದಾದ್ರಿ ಬೆಟ್ಟದಲ್ಲಿ ಅಭಿಷೇಕ
ಚಿಂತಾಮಣಿ:
ನಗರ ಹಾಗೂ ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ಮಂಗಳವಾರ ಹನುಮ ಜಯಂತಿಯನ್ನು ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.

ನಗರದ ಹೃದಯ ಭಾಗದಲ್ಲಿರುವ ವರದಾದ್ರಿ ಬೆಟ್ಟದಲ್ಲಿ ನೆಲೆಸಿರುವ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಅಲಂಕಾರ, ಪೂಜೆ, ಅಭಿಷೇಕಗಳು ನಡೆದವು. ಹನುಮ ಜಯಂತಿ ಅಂಗವಾಗಿ ಬೆಟ್ಟದಲ್ಲಿ ಕಡಲೇಕಾಯಿ ಜಾತ್ರೆ ಸಹ ನಡೆಯಿತು. ಬೆಳಿಗ್ಗೆಯಿಂದಲೇ ನೂರಾರು ಭಕ್ತರು ಬೆಟ್ಟವನ್ನು ಸಾಲುಗಟ್ಟಿ ಹತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕನಂಪಲ್ಲಿ: ನಗರದ ಹೊರವಲಯದ ಕನಂಪಲ್ಲಿಯಲ್ಲಿರುವ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯದಲ್ಲೂ ವಿಶೇಷ ಪೂಜೆ ಅಲಂಕಾರ ಮಾಡಲಾಗಿತ್ತು. ಮಾಜಿ ಸಚಿವ ಚೌಡರೆಡ್ಡಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಕುರುಟಹಳ್ಳಿ: ತಾಲ್ಲೂಕಿನ ಕುರುಟಳ್ಳಿ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ವೀಳ್ಯೆದೆಲೆ ಅಲಂಕಾರ, ಉದ್ದಿನ ವಡೆಗಳ ಹಾರ ಭಕ್ತಾದಿಗಳ ಮನಸೆಳೆಯುವಂತಿತ್ತು. ಬೆಳಿಗ್ಗೆಯಿಂದ ನೂರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಹಣ್ಣು ಕಾಯಿ ಮಾಡಿಸಿದರು.

ಬೂರಗಮಾಕಲಹಳ್ಳಿ: ನಗರದ ಬೂರಗಮಾಕಲಹಳ್ಳಿ ವೀರಾಂಜನೇಸ್ವಾಮಿ ದೇವಾಲಯದಲ್ಲೂ ಹನುಮ ಜಯಂತಿ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.  ನಾರಸಿಂಹಪೇಟೆ, ವಿನಾಯಕನಗರ, ಕೋಲಾರ ರಸ್ತೆ ಆಂಜನೇಯಸ್ವಾಮಿ ದೇವಾಲಯ, ತಾಲ್ಲೂಕಿನ ಕಂಗಾನಹಳ್ಳಿ, ರಾಯಪ್ಪಲ್ಲಿ, ಧನಮಿಟ್ಟೇನಹಳ್ಳಿ ಗ್ರಾಮಗಳ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT