ಹೊಸಪೇಟೆ: ನಗರದ ವಡಕರಾಯ ದೇವಸ್ಥಾನದಲ್ಲಿ ಶುಕ್ರವಾರ ‘ಹನುಮ ಮಾಲಾ ದೀಕ್ಷಾವ್ರತ’ ಆರಂಭವಾಯಿತು. ಹೊಸಪೇಟೆ ಸೇರಿದಂತೆ ತಾಲ್ಲೂಕಿನ ಕಮಲಾಪುರ, ಕಡ್ಡಿರಾಂಪುರ, ಹಂಪಿ, ಮಲಪನಗುಡಿ ಗ್ರಾಮದ ಸುಮಾರು 500ಕ್ಕೂ ಅಧಿಕ ಬಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಹನುಮಮಾಲಾ ದೀಕ್ಷಾವ್ರತ ಸ್ವೀಕರಿಸಿದರು.
ಇದಕ್ಕೂ ಮೊದಲು ಅಂದರೆ ಬೆಳಿಗ್ಗೆ 8ಗಂಟೆಗೆ ದೇವಾಲಯದಲ್ಲಿ ಗಣಹೋಮ, ಪವಮಾನ ಹೋಮ, ಆಂಜನೇಯ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ಅಲಂಕಾರ, ಪೂರ್ಣಾಹುತಿ ನಡೆಸಲಾಯಿತು. ಸಂತೋಷ ಚಿಕ್ಕಭಟ್ ಜೋಶಿ ಅವರ ನೇತೃತ್ವದಲ್ಲಿ ನಡೆದ ಹೋಮ ಕಾರ್ಯಕ್ರಮದಲ್ಲಿ ಪ್ರವೀಣ್ ದಿಕ್ಷೀತ್ ಹಾಗೂ ದಿವಾಕರ ಕುಲಕರ್ಣಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಬಜರಂಗ ದಳದ ರಾಜ್ಯ ಸಂಚಾಲಕ ಸೂರ್ಯನಾರಾಯಣ ಅವರು, ‘ಯುವಕರು ದುಶ್ಚಟಗಳನ್ನು ತ್ಯಜಿಸಿ ಸಾತ್ವಿಕ ಜೀವನ ನಡೆಸಬೇಕು. ದುಶ್ಚಟಗಳಿಂದ ಹಣ ವ್ಯಯವಾಗುವುದಲ್ಲದೆ, ಆರೋಗ್ಯವು ಹಾಳಾಗಲಿದೆ. ತಂದೆ, ತಾಯಿ, ಗುರು ಹಿರಿಯರನ್ನು ಗೌರವಿಸಬೇಕು, ಪರರನ್ನು ತನ್ನಂತೆ ತಿಳಿದು ಜೀವಿಸಬೇಕು. ಪರರಿಗೆ ನೋವು ನೀಡದೆ ಜೀವಿಸುವುದು ಹಿಂದೂ ಧರ್ಮದ ಧ್ಯೇಯ’ ಎಂದರು.
ಮಾಲಾ ಧಾರಣೆ ನಂತರ ವಡಕರಾಯ ದೇವಸ್ಥಾನ ದಿಂದ ಪಾದಗಟ್ಟೆ ಆಂಜನೇಯ ದೇವಸ್ಥಾನದ ವರೆಗೆ ಶೋಭಾಯಾತ್ರೆ ನಡೆಯಿತು. ರಾಜಮಾತ ಚಂದ್ರಕಾಂತ ದೇವಿ, ದಾನಿಗಳಾದ ಚಿನ್ನಿರಾಮಕುಮಾರ್, ಬಸವರಾಜ್ ನಾಲತ್ವಾಡ, ಎನ್.ಟಿ ರಾಜು ಸೇರಿದಂತೆ ಹಲವರು ಪಾಲ್ಗೋಂಡಿದ್ದರು.
ಸಾನಬಾಳು ಹನುಮಾನ್ ಕಾರ್ಯಕರ್ತರಿಗೆ ಚಾಲಿಸ ಬೋಧಿಸಿದರು. ವೆಂಕಪ್ಪ ಮಡ್ಡೆರ್ ಅವರು ಹನುಮಾನ್ ಅಷ್ಟೋತ್ತರ ಬೋಧಿಸಿದರು. ಗೋವಿಂದ ಕುಲಕರ್ಣಿ ನಿರೂಪಿಸಿದರು.