ಹನುಮಸಾಗರ: ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಹಾಗೂ ವಾಟರ್ ಲೈಫ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ಸ್ಥಾಪಿಸಲಾಗಿರುವ ನೀರಿನ ಶುದ್ಧೀಕರಣ ಘಟಕೆರಡು ತಿಂಗಳ ಹಿಂದೆಯೇ ಬಂದ್ ಆಗಿದೆ.
ಘಟಕವು ಕಾರ್ಯಾರಂಭಗೊಂಡಾಗಿನಿಂದ ಜನರು ಕಡಿಮೆ ದರದಲ್ಲಿ ಸಿಗುವ ಶುದ್ಧ ಕುಡಿಯುವ ನೀರನ್ನು ಉಪಯೋಗಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಭಾಗದಲ್ಲಿ ನೀರಿನಲ್ಲಿ ಹೆಚ್ಚಿನ ಪ್ರಮಾಣ ಫ್ಲೋರೈಡ್ ಅಂಶ ಇರುವುದರಿಂದಲೇ ಇಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಅಲ್ಲದೆ ವಿವಿಧ ಭಾಗಗಳಿಗೆ ಸರಿಯಾಗಿ ನಲ್ಲಿಯ ನೀರು ಪೂರೈಕೆಯಾಗದಿರುವ ಕಾರಣದಿಂದ ಬಹುತೇಕ ಜನರು ಕುಡಿಯುವ ನೀರಿಗಾಗಿ ಈ ಘಟಕವನ್ನು ಅವಲಂಬಿಸಿದ್ದಾರೆ.
ಆದರೆ ಆರಂಭಗೊಂಡು ಮೂರು ತಿಂಗಳದವರೆಗೆ ಸರಿಯಾಗಿ ನೀರು ಪೂರೈಕೆ ಮಾಡಿದ ಈ ಘಟಕ ನಂತರ ಬೋರ್ವೆಲ್ ರಿಪೇರಿ ಎಂಬ ನೆಪದಲ್ಲಿ ಸ್ಥಗಿತಗೊಳಿಸಲಾಗಿತ್ತು. ನಂತರ ದುರಸ್ತಿ ಮಾಡಿ ನೀರು ಪೂರೈಸಲಾಯಿತು. ಈಗ ಬೋರ್ವೆಲ್ನಲ್ಲಿ ನೀರು ಕಡಿಮೆ ಇದೆ. ಊರಿನ ಜನಕ್ಕೆ ಸಾಕಾಗುತ್ತಿಲ್ಲ ಎಂದು ಈ ಘಟಕಕ್ಕೆ ಗ್ರಾಮ ಪಂಚಾಯಿತಿ ನೀರು ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ.