ಹನುಮಸಾಗರ: ಹೊಲಗಳಲ್ಲಿ ಬೆಳೆದ ಬೆಳೆಗಳು ಮಳೆ ಇಲ್ಲದ್ದಕ್ಕೆ ಒಣಗಿ ಹೋದ್ವು, ಇದ್ದಬಿದ್ದ ಬೋರನ್ಯಾಗಿನ ನೀರಿನಿಂದ ಬೆಳೆದ ಜೋಳದ ಬೆಳೆ ಈಗ ಕೊಯ್ಲಾಗೈತೆ ತೆನೆ ಓಣಗದೆ ಮಳೆಗೆ ಹಾಳಾಗಿ ಹೋಗಕತ್ತೈತೆ ಎಂದು ಹನುಮಸಾಗರದ ರೈತ ಚಂದಪ್ಪ ಗುರಿಕಾರ ನೀರಾವರಿ ಆಶ್ರಯದಲ್ಲಿ ಬೆಳೆದ ಜೋಳದ ತೆನೆಗಳನ್ನು ಆರಲೆಂದು ಹರವುತ್ತಾ ನೋವು ತೋಡಿಕೊಂಡರು.
ಇಲ್ಲಿನ ಕೆಲ ರೈತರು ಕೊಳವೆಬಾವಿ ನೀರಿನಲ್ಲಿ ಬೆಳೆದ ಹೈಬ್ರೀಡ್ ಜೋಳದಂತಹ ಅನೇಕ ಬೆಳೆಗಳು ಸದ್ಯ ಬಹುತೇಕ ತೋಟಗಳಲ್ಲಿ ಕೊಯ್ಲಿಗೆ ಬಂದಿದ್ದು ನಿರಂತರ ಮಳೆ ಬೀಳುತ್ತಿರುವ ಪರಿಣಾಮ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ರೈತರು ನೋವು ತೋಡಿಕೊಳ್ಳುತ್ತಾರೆ.
ಕಳೆದ ವಾರದಿಂದ ಸೂರ್ಯನ ಮುಖವೆ ಕಾಣದಂತಾಗಿದ್ದು ನಾಲ್ಕಾರು ದಿನಗಳಿಂದ ಬಿಟ್ಟುಬಿಡದೆ ಮಳೆ ಸುರಿಯುತ್ತಿರುವುದರಿಂದಾಗಿ ಕೊಯ್ಲಿಗೆ ಬಂದ ಸೂರ್ಯಕಾಂತಿ, ಜೋಳ, ಎಳ್ಳು, ಸಜ್ಜೆಯಂತಹ ಬೆಳೆಗಳು ತೆನೆಗಳಲ್ಲಿಯೇ ಮೊಳಕೆಯೊಡೆಯುವ ಸಾಧ್ಯತೆ ಇದೆ ಎಂಬ ಆತಂಕ ರೈತರದ್ದಾಗಿದೆ.