ಹನುಮಸಾಗರ: ಇಲ್ಲಿನ ಲಕ್ಷ್ಮೀ ವೆಂಕಟೇಶ್ವರ ಬೆಟ್ಟದಲ್ಲಿ ನಡೆದಿರುವ ಶ್ರೀ ಸತ್ಯ ಪ್ರಮೋದತೀರ್ಥರ ಮಹಾ ಸಮಾರಾಧನೆಯ ಉತ್ತರಾರಾಧನೆಯಾದ ಭಾನುವಾರ ವಿವಿಧ ಭಜನಾ ಮಂಡಳಿಗಳ ನೂರಾರು ಸದಸ್ಯರು ಮೆಟ್ಟಿಲೋತ್ಸವ ಕಾರ್ಯಕ್ರಮ ಡೆಸಿಕೊಟ್ಟರು.
ಶ್ರೀ ಕೂಡಲಿ ಆರ್ಯ ಅಕ್ಷೋಭ್ಯತೀರ್ಥ ಮಠಾಧೀಶ ಶ್ರೀ ರಘುವಿಜಯ ತೀರ್ಥರ ನೇತೃತ್ವದಲ್ಲಿ ನಡೆದ ಮೇಟ್ಟಿಲೋತ್ಸವಕ್ಕೂ ಮುನ್ನ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಅವರು ಉಪನ್ಯಾಸ ನಡೆಸಿಕೊಟ್ಟರು. ನಂತರದಲ್ಲಿ ಭಜನಾ ಮಂಡಳಿಗಳು ದಾಸರ ಸಂಕೀರ್ತನೆಗಳೊಂದಿಗೆ ಗ್ರಾಮ ಪ್ರದಕ್ಷಿಣೆ ಮಾಡುತ್ತಾ ವಿವಿಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು.
ನಂತರ ಅಭಿನವ ತಿರುಪತಿ ಎಂದೇ ಪ್ರಸಿದ್ಧಿಯಾಗಿರುವ ಲಕ್ಷ್ಮೀವೆಂಕಟೇಶ್ವರ ಬೆಟ್ಟದ ಪಾದ ಮೆಟ್ಟಿಲುಗಳಿಗೆ ಆಗಮಿಸಿ ಸಕಲ ಪೂಜಾ ವಿಧಿವಿಧಾನಗಳನ್ನು ಸಲ್ಲಿಸಿ ಮೆಟ್ಟಿಲೋತ್ಸವ ಆರಂಭಿಸಲಾಯಿತು.
ಸ್ಥಳೀಯ ಪಂಡಿತರಾದ ಪ್ರಮೋದ ಆಚಾರ್ಯ, ಪ್ರಹ್ಲಾದ ಆಚಾರ್ಯ ಮತ್ತು ವಿವಿಧೆಡೆಗಳಿಂದ ಅನೇಕ ವಿದ್ವಾಂಸರು ಪಾಲ್ಗೊಂಡಿದ್ದರು.
ರಾಜ್ಯದ ವಿವಿಧ ಭಾಗದಿಂದ ಬಂದಿದ್ದ ಪುರುಷ ಹಾಗೂ ಮಹಿಳಾ ಭಜನಾ ಮಂಡಳಿಗಳ ಸದಸ್ಯರು ಏಕ ಕಾಲಕ್ಕೆ ಸಕಲ ವಾದ್ಯಗಳೊಂದಿಗೆ ಸಾಲುಸಾಲಾಗಿ ಹಾಡುತ್ತಾ ಬರುತ್ತಿದ್ದುದು ಆಕರ್ಷಕವಾಗಿತ್ತು.