ಗಂಗಾವತಿ: ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಮಾಲಿ ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ವಸ್ತುಸ್ಥಿತಿಯ ಆಧಾರದ ಮೇಲೆ ರಾಜ್ಯದ ಎಪಿಎಂಸಿಗಳನ್ನು ಎರಡು ಅಥವಾ ಮೂರು ಭಾಗವಾಗಿ ವರ್ಗೀಕರಿಸಲಾಗುವುದು ಎಂದು ಕೃಷಿ ಮಾರಾಟ ನಿರ್ದೇಶನಾಲಯದ ನಿರ್ದೇಶಕ ವಿ.ಬಿ. ಪಾಟೀಲ್ ತಿಳಿಸಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿರುವ ಸಮುದಾಯ ಭವನದಲ್ಲಿ ಭಾನುವಾರ ಎಪಿಎಂಸಿ ಹಮಾಲಿ ಕಾರ್ಮಿಕರ 2ನೇ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಎಪಿಎಂಸಿ ಹಮಾಲಿ ಕಾರ್ಮಿಕರು ಈ ಹಿಂದೆ ಸಲ್ಲಿಸಿದ್ದ ಬೇಡಿಕೆಯ ಬಗ್ಗೆ ಚರ್ಚಿಸಿ ಪರಿಶೀಲನೆಗೆ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಅವುಗಳಲ್ಲಿ ಒಂದಷ್ಟು ಬೇಡಿಕೆ ಈಡೇರುವ ಹಂತದಲ್ಲಿವೆ. ಇವುಗಳಲ್ಲಿ ವಸತಿ ಸಮಸ್ಯೆಯೇ ಮುಖ್ಯವಾದದ್ದು. ರಾಜ್ಯದ ಕೆಲ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಜಮೀನು ಇದೆ.
ಅಂತಹ ಎಪಿಎಂಸಿಗಳಲ್ಲಿ ಹಮಾಲಿ ಕಾರ್ಮಿಕರಿಗೆ ವಸತಿ ನಿವೇಶನಕ್ಕೆ ಯೋಜನೆ ರೂಪಿಸಲಾಗುವುದು ಎಂದರು. ಹಮಾಲಿ ಕಾರ್ಮಿಕರ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಿಐಟಿಯು ಸಂಘಟನೆಯ ರಾಜ್ಯ ಕಾರ್ಯದರ್ಶಿ ಎಸ್. ಪ್ರಸನ್ನ ಕುಮಾರ್, ುಖಂಡ ಜಿ. ನಾಗರಾಜ್, ಮಾಜಿ ಶಾಸಕ ಜಿ. ವೀರಪ್ಪ, ಎಪಿಎಂಸಿ ಹಮಾಲರ ಸಂಘದ ಮಾಜಿ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ, ಆರ್.ಕೆ. ದೇಸಾಯಿ, ಎ.ಎಲ್. ತಿಮ್ಮಣ್ಣ ಇದ್ದರು.