ಹರಳಯ್ಯ - ಮಾದರಸರ ಹುತಾತ್ಮ ದಿನಾಚರಣೆಗೆ ಅಡ್ಡಿಪಡಿಸಲು ಯತ್ನ (ಪ್ರ.ವಾ.ಫೆ.13) ಎಂಬ ಸುದ್ಧಿಯನ್ನು ಓದಿದ ನಂತರ ನಾವು ಇನ್ನೂ ಯಾವ ಶತಮಾನದಲ್ಲಿ ಇದ್ದೇವೆ ಎಂಬ ಪ್ರಶ್ನೆ ಕಾಡುವಂತಾಗಿದೆ.
ಅಖಿಲ ಭಾರತ ವೀರಶೈವ ಮಹಾಸಭಾ ಮಾರ್ಚ್ 5 ಮತ್ತು 6 ರಂದು ಬಸವಕಲ್ಯಾಣದಲ್ಲಿ ಆಯೋಜಿಸಿರುವ ಹರಳಯ್ಯ - ಮಾದರಸರ ಹುತಾತ್ಮ ದಿನಾಚರಣೆಗೆ ಕೆಲವು ಲಿಂಗಾಯತ ಮಠಾಧೀಶರು ಹುನ್ನಾರ ನಡೆಸಿದ್ದಾರೆ ಎಂದು ಚಿತ್ರದುರ್ಗದ ಶ್ರೀ ಮುರುಘಾ ಮಠದ ಸ್ವಾಮಿಗಳು ಆರೋಪಿಸಿದ್ದಾರೆ. ಬಸವಣ್ಣನವರ ಆಶಯದಂತೆ ಜಾತ್ಯತೀತ ಸಮಾಜ ನಿರ್ಮಾಣಕ್ಕೆ ದಾರಿ ಮಾಡಿಕೊಡುವ ಮತ್ತು ಜಾತಿ ವ್ಯವಸ್ಥೆಯ ಕೊಳೆಚೆಯಲ್ಲಿ ಹೊರಳಾಡುತ್ತಿರುವವರಿಗೆ ಇಂತಹ ಅಪರೂಪದ ಆಚರಣೆಗಳನ್ನು ವಿರೋಧಿಸುವವರ ನೈತಿಕ ಅಧಃಪತನವನ್ನು ತೋರುತ್ತದೆ.
ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ಆಶೀರ್ವಾದದಿಂದ ಸಮಗಾರ ಹರಳಯ್ಯನವರ ಮಗನ ಮತ್ತು ಬ್ರಾಹ್ಮಣ ಮಾದರಸರ ಮಗಳ ಮದುವೆ ಕಲ್ಯಾಣ ಕ್ರಾಂತಿಗೆ ನಾಂದಿಯಾಯಿತು. ದೇವರು ಮತ್ತು ಧರ್ಮದ ಹೆಸರಿನಲ್ಲಿ ನಡೆದುಕೊಂಡು ಬಂದ ಜಾತಿಪದ್ಧತಿಯನ್ನು ವಿರೋಧಿಸಿ, ಜಾತಿಗಿಂತ ಪ್ರೀತಿ ದೊಡ್ಡದು ಎಂದು ತಮ್ಮ ಮಕ್ಕಳ ಅಂತರ್ಜಾತಿ ವಿವಾಹವನ್ನು ನಡೆಸಿದ ಊರಿನಲ್ಲಿ ಈ ಹುತಾತ್ಮ ದಿನಾಚರಣೆ ಆಚರಿಸುತ್ತಿರುವುದು ಸಂತೋಷದ ವಿಷಯ. ಇದನ್ನು ನಡೆಯದಂತೆ ಹುನ್ನಾರ ನಡೆಸುತ್ತಿರುವ ಕೆಲವು ಮಠಾಧೀಶರು ಬಸವಣ್ಣನವರು ಅನುಯಾಯಿಗಳಾಗಲು ಅರ್ಹರೇ ?