ಹೈದರಾಬಾದ್, (ಐಎಎನ್ಎಸ್): ಪುಟ್ಟಪರ್ತಿಯಿಂದ ಬೆಂಗಳೂರಿನತ್ತ 35 ಲಕ್ಷ ರೂಪಾಯಿಗಳಷ್ಟು ಹಣವನ್ನು ಸಾಗಿಸುತ್ತಿದ್ದ ಹರಿಶ್ಚಂದ್ರ ಶೆಟ್ಟಿಯನ್ನು ಬಂಧಿಸಿರುವ ಪೊಲೀಸರು ಸೋಮವಾರ ಆತನನ್ನು ಅನಂತಪುರದಲ್ಲಿ ನ್ಯಾಯಾಧೀಶರ ಎದುರು ಹಾಜರು ಪಡಿಸಿದಾಗ, ಅವರು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಪೊಲೀಸರು ಹರಿಶ್ಚಂದ್ರ ಶೆಟ್ಟಿಯಿಂದ ವಶಪಡಿಸಿಕೊಂಡ ಮೊತ್ತದ ವಿವರವನ್ನೂ ನ್ಯಾಯಾಧೀಶರಿಗೆ ನೀಡಿದರು. ಹರಿಶ್ಚಂದ್ರ ಶೆಟ್ಟಿಯನ್ನು ಜೂನ್ 27ರವರೆಗೆ ಬಂಧನದಲ್ಲಿಡುವಂತೆ ಅನಂತಪುರ ಜಿಲ್ಲೆಯ ಸ್ಥಳೀಯ ನ್ಯಾಯಾಲಯ ಆದೇಶ ನೀಡಿದೆ.
ಪುಟ್ಟಪರ್ತಿಯಿಂದ ಬೆಂಗಳೂರಿಗೆ ಹಣವನ್ನು ಸಾಗಿಸುತ್ತಿದ್ದ ವೇಳೆ ಹಿಂದೂಪುರ ಪಟ್ಟಣದ ಟೋಲ್ಗೇಟ್ ಬಳಿ ಶೆಟ್ಟಿ ಯನ್ನು ಬಂಧಿಸಲಾಗಿತ್ತು. ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ನೀಡಲೆಂದು ಟ್ರಸ್ಟ್ ಸದಸ್ಯರ ಚಾಲಕರೊಬ್ಬರು ತಮಗೆ ಈ ಹಣವನ್ನು ನೀಡಿದ್ದರು ಎಂದು ಬಂಧನದ ವೇಳೆ ಹರಿಶ್ಚಂದ್ರ ಶೆಟ್ಟಿ ಪೊಲೀಸರಿಗೆ ತಿಳಿಸಿದ್ದಾನೆ.
ಆಶ್ರಮದ ಭದ್ರತಾ ಅಧಿಕಾರಿಯ ವಿಚಾರಣೆ: ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಪೊಲೀಸರು ಸಾಯಿಬಾಬಾ ಆಶ್ರಮದ ಮುಖ್ಯ ಭದ್ರತಾ ಅಧಿಕಾರಿಯನ್ನು ಸೋಮವಾರ ರಾತ್ರಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪೊಲೀಸರು ಆಶ್ರಮದಿಂದ ಭದ್ರತಾ ಅಧಿಕಾರಿ ಪ್ರಧಾನ್ ಅವರನ್ನು ವಿಚಾರಣೆಗಾಗಿ ಕರೆದೊಯ್ದಿದ್ದಾರೆ ಎಂದು ಮೂಲಗಳು ಹೇಳಿವೆ.ಬಂಧಿತ ಹರಿಶ್ಚಂದ್ರ ಶೆಟ್ಟಿ ಅವರನ್ನು ಅನಂತಪುರ ಜಿಲ್ಲೆಯ ಕೋರ್ಟ್ ಜೂನ್27ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ ಕೆಲವು ತಾಸಿನ ಬಳಿಕ ಈ ಬೆಳವಣಿಗೆ ಆಗಿದೆ.
ಇನ್ನಿಬ್ಬರ ಬಂಧನ
ಅನಂತಪುರ ವರದಿ (ಪಿಟಿಐ): ಭಾರಿ ಮೊತ್ತದ ಹಣ ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೋಮವಾರ ಸೋಹನ್ಶೆಟ್ಟಿ ಮತ್ತು ಚಂದ್ರಶೇಖರ್ ಎಂಬ ಇಬ್ಬರು ಬಂಧಿಸಿದ್ದು ಇಲ್ಲಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು. ಈ ಇಬ್ಬರು ಆರೋಪಿಗಳನ್ನು ಈ ತಿಂಗಳ 27ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.