ಹರಿಹರ: ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಜಿಗಳಿ ಕ್ಷೇತ್ರದ ಬಿ.ಎಸ್. ಸೋಮಸುಂದರಪ್ಪ ಹಾಗೂ ಕೊಕ್ಕನೂರು ಕ್ಷೇತ್ರದ ಎಸ್. ಸರೋಜಮ್ಮ ಕ್ರಮವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆಯಾಗಿ ಆಯ್ಕೆಯಾಗುವ ಮೂಲಕ ಬಿಜೆಪಿ ಮೊದಲ ಬಾರಿಗೆ ತಾ.ಪಂ. ಅಧಿಕಾರ ಚುಕ್ಕಾಣಿ ಹಿಡಿಯಿತು.ತಾ.ಪಂ.ಯ ಒಟ್ಟು 18 ಸ್ಥಾನಗಳಲ್ಲಿ ಬಿಜೆಪಿ 8, ಕಾಂಗ್ರೆಸ್ 7, ಜೆಡಿಎಸ್ 2 ಹಾಗೂ ಒಬ್ಬರು ಪಕ್ಷೇತರ ಸದಸ್ಯರ ಬಲವನ್ನು ಹೊಂದಿದೆ. ಬಿಜೆಪಿಯ ಸೋಮಸುಂದರಪ್ಪ, ಕಾಂಗ್ರೆಸ್ನ ಬಸವರಾಜಪ್ಪ, ಎಚ್.ಕೆ. ಕನ್ನಪ್ಪ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಸರೋಜಮ್ಮ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.
ಕೊನೆ ಗಳಿಗೆಯಲ್ಲಿ ಕನ್ನಪ್ಪ ನಾಮಪತ್ರ ವಾಪಸ್ ಪಡೆದರು. ಸೋಮಸುಂದರಪ್ಪ 11ಮತಗಳನ್ನು ಪಡೆದು ಜಯಶೀಲರಾದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಪಕ್ಷೇತರ ಸದಸ್ಯೆ ಸರೋಜಮ್ಮ ಅವಿರೋಧವಾಗಿ ಆಯ್ಕೆಯಾಗದರು. ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿಯ ಹೊಂದಾಣಿಕೆಯಿಂದ ಬಿಜೆಪಿಗೆ ಈ ಯಶಸ್ಸು ಲಭಿಸಿದೆ.
ಉಪ ವಿಭಾಗಧಕಾರಿ ಕೆ.ಎಂ. ಜಾನಕಿ ಚುನವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ತಹಶೀಲ್ದಾರ್ ಜಿ. ನಜ್ಮಾ, ತಾ.ಪಂ. ಇಒ ಎಚ್.ಎನ್. ರಾಜ್ ಉಪಸ್ಥತರಿದ್ದರು
ಕುಸ್ತಿ-ದೋಸ್ತಿ: ಮರ್ಮವೇನು?
ಹರಿಹರ: ‘ರಾಜಧಾನಿಯಲ್ಲಿ ಕುಸ್ತಿ, ತಾ.ಪಂ.ಯಲ್ಲಿ ದೋಸ್ತಿ. ಇದು ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಧೋರಣೆಯಾಗಿದೆ’ ಎಂದು ಪ್ರತಿ ಪಕ್ಷದ ಸದಸ್ಯರಾದ ಎಚ್.ಎಚ್. ಬಸವರಾಜ್, ಡಿ. ಕುಮಾರ್, ಆರ್. ಸುರೇಶ್ ಅಣಕವಾಡಿದರು.ಜಾತ್ಯತೀತ ತತ್ವ ಬೋಧಿಸುವ ಜೆಡಿಎಸ್, ಬಿಜೆಪಿಯೊಂದಿಗೆ ಕೈ ಜೋಡಿಸಿರುವುದು ಅಪವಿತ್ರ ಮೈತ್ರಿಯ ಸಂಕೇತವಾಗಿದೆ. ಬಿಜೆಪಿಯನ್ನು ಕೋಮುವಾದಿ ಎಂದು ಬಣ್ಣಿಸುವ ಜೆಡಿಎಸ್, ಅಧಿಕಾರಕ್ಕಾಗಿ ಕೀಳು ಸಂಸ್ಕೃತಿಯನ್ನು ಬೆಳೆಸುತ್ತಿದೆ.
ಈ ಸಂದರ್ಭದಲ್ಲಿ ಜೆಡಿಎಸ್ ನಾಯಕರ ಅನುಪಸ್ಥಿತಿ ಅಪರೇಷನ್ ಕಮಲ ನಡೆದಿರಬಹುದು ಎಂಬ ಸಂಶಯ ಮೂಡಿಸುತ್ತದೆ ಎಂದು ಅನುಮಾನ ವ್ಯಕ್ತಪಡಿಸಿದ ಅವರು, ನಗರಸಭೆಯ ಅನೇಕ ಅಭಿವೃದ್ಧಿ ಕಾರ್ಯಗಳು ಜೆಡಿಎಸ್ ಸದಸ್ಯರು ಮತ್ತು ಶಾಸಕರ ಮಧ್ಯೆ ಇರುವ ಹೊಂದಾಣಿಕೆ ಕೊರತೆಯಿಂದಾಗಿ ನೆನೆಗುದಿಗೆ ಬಿದ್ದಿವೆ. ಇದೇ ಮೈತ್ರಿ ನಗರಸಭೆಗೂ ವಿಸ್ತರಿಸಿ, ನಗರದ ಅಭಿವೃದ್ಧಿ ವೇಗ ಪಡೆದುಕೊಳ್ಳಲಿ ಎಂದು ಹಾರೈಸಿದರು..
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.