ದಾವಣಗೆರೆ: ಜಿಲ್ಲೆಗೆ ಹಿಂದುಳಿದ ಪ್ರದೇಶಾಭಿವೃದ್ಧಿ ಯೋಜನೆ ಅಡಿ ನೀಡಲಾದ ಅನುದಾನ ಬಳಕೆಯಿಂದ ದಾವಣಗೆರೆ ಹಾಗೂ ಹರಿಹರ ತಾಲ್ಲೂಕು ಹೊರಗಿಟ್ಟಿರುವುದಕ್ಕೆ ಆ ಭಾಗದ ಸದಸ್ಯರು ಜಿ.ಪಂ. ಸಾಮಾನ್ಯಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
3054ರ ಈ ಯೋಜನೆಯಲ್ಲಿ ಜಿಲ್ಲೆಗೆ ರೂ 3.80 ಕೋಟಿ ದೊರೆತಿದ್ದು, ಚನ್ನಗಿರಿ, ಹೊನ್ನಾಳಿ, ಹರಪನಹಳ್ಳಿ ಹಾಗೂ ಜಗಳೂರು ತಾಲ್ಲೂಕುಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ. ನಂಜುಂಡಪ್ಪ ವರದಿ ಆಧಾರದಲ್ಲಿ ಸರ್ಕಾರ ಈ ಆದೇಶ ಹೊರಡಿಸಿದೆ ಎಂದು ಅಧ್ಯಕ್ಷ ಕೆ.ಜಿ. ಬಸವಲಿಂಗಪ್ಪ ಹಾಗೂ ಸಿಇಒ ಗುತ್ತಿ ಜಂಬುನಾಥ್ ತಿಳಿಸಿದರು.
ಆದರೆ, ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರಾದ ಎಂ. ನಾಗೇಂದ್ರಪ್ಪ, ವೀರಭದ್ರಪ್ಪ ಮತ್ತಿತರರು, ಈ ಅಸಮಾನತೆ ಸರಿ ಪಡಿಸುವವರೆಗೂ ಕ್ರಿಯಾ ಯೋಜನೆಗೆ ಅನುಮತಿ ನೀಡಬಾರದು ಎಂದು ಪಟ್ಟು ಹಿಡಿದರು.
ಸ್ವತಃ ವಕೀಲರಾದ ನಾಗೇಂದ್ರಪ್ಪ ಈ ವಿಚಾರವಾಗಿ ವಾದಗಳ ಸರಣಿಯನ್ನೇ ಮಂಡಿಸಿದರು. ಕೊನೆಗೆ ಸಿಇಒ ಮಾತನಾಡಿ, ಹರಿಹರ-ದಾವಣಗೆರೆಗೆ ದೊರೆಯುವ ಅನುದಾನ ಹಾಗೆಯೇ ಉಳಿಸಿಕೊಂಡು, ಉಳಿದ ತಾಲ್ಲೂಕಿಗೆ ಅನುಮೋದನೆ ನೀಡಲಿ, ಮಳೆಗಾಲ ಆರಂಭ ಆಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗುತ್ತದೆ.
ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ ನಂತರ ಅನುಮತಿ ಪಡೆದು ಎರಡೂ ತಾಲ್ಲೂಕಿಗೆ ಅನುದಾನ ಬಳಸಲು ಅನುಮೋದನೆ ಪಡೆಯೋಣ ಎಂದರು.