ಹರಿಹರ: ಪ್ರಗತಿ ಸಾಲಿಮಠ ಅವರ ಕುಬೇರ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣಗೊಂಡ ಚೊಚ್ಚಲ ಚಲನಚಿತ್ರ `ಆಡೂ ಆಟ ಆಡು~ದ ಧ್ವನಿ ಸುರುಳಿಯ ಬಿಡುಗಡೆ ಸಮಾರಂಭ ಸೆ. 24ರ ಸಂಜೆ 5ಕ್ಕೆ ನಗರದ ಮಹಾತ್ಮಗಾಂಧಿ ಮೈದಾನದಲ್ಲಿ ನಡೆಯಲಿದೆ ಎಂದು ಚಿತ್ರದ ನಾಯಕ ನಟ ಜಗನ್ ತಿಳಿಸಿದರು.
ನಾನು ಮೂಲತಃ ತಾಲ್ಲೂಕಿನ ಧೂಳೆಹೊಳೆ ಗ್ರಾಮದ ನಿವಾಸಿ. ಈಗಾಗಲೇ ಮೂರು ಚಿತ್ರಗಳಲ್ಲಿ ಪಾತ್ರ ನಿರ್ವಹಿಸಿದ್ದೇನೆ. ನಮ್ಮ ತಾಲ್ಲೂಕಿನಲ್ಲೂ ಉತ್ತಮ ಚಿತ್ರೀಕರಣದ ತಾಣಗಳಿವೆ ಎಂದು ಪರಿಚಯಿಸುವ ಉದ್ದೇಶದಿಂದ ಈ ಚಲನಚಿತ್ರವನ್ನು ತಾಲ್ಲೂಕಿನ ಧೂಳೆಹೊಳೆ, ನಂದಿಗಾವಿ, ರಾಜನಹಳ್ಳಿ ಗ್ರಾಮದಲ್ಲೂ ಚಿತ್ರೀಕರಿಸಿದ್ದೇವೆ.
ಚಿತ್ರೀಕರಣದ ಸಂದರ್ಭದಲ್ಲಿ ಗ್ರಾಮಸ್ಥರು ಚಿತ್ರೀಕರಣ ತಂಡದವರಿಗೆಲ್ಲಾ ಊಟ-ತಿಂಡಿ ಒದಗಿಸುವ ಮೂಲಕ ಉತ್ತಮ ಆತಿಥ್ಯ ನೀಡಿದ್ದಾರೆ ಎಂದು ಈಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಹೆಮ್ಮೆಯಿಂದ ಸ್ಮರಿಸಿಕೊಂಡರು.
ಚಿತ್ರಕ್ಕಾಗಿ ಮಲೇಷಿಯಾ, ಮೈಸೂರು, ಬೆಂಗಳೂರು ಮೊದಲಾದ ಕಡೆ ಚಿತ್ರೀಕರಣ ನಡೆಸಲಾಗಿದೆ. `ಬುದ್ಧಿವಂತ~ ಚಿತ್ರ ನಿರ್ದೇಶನ ಮಾಡಿದ ರಾಮನಾಥ ಋಗ್ವೇದಿ ಚಿತ್ರದ ನಿರ್ದೇಶನ ಮಾಡಿದ್ದಾರೆ. `ಕೋಲುಮಂಡೆ ಜಂಗಮದೇವ...~ ಖ್ಯಾತಿಯ ವಿ. ಮನೋಹರ ಸುಮಧುರ ಗೀತೆಗಳೊಂದಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.
ಮುಂಬೈ ಬೆಡಗಿ ಶ್ರುತಿ ಪ್ರಕಾಶ್ ನಾಯಕಿಯಾಗಿ ನಟಿಸಿದ್ದಾರೆ. ಸುಮನ್ ರಂಗನಾಥ್, ತಿಲಕ್, ಶ್ರೀನಿವಾಸಮೂರ್ತಿ, ಜೈಜಗದೀಶ್, ತಬಲಾನಾಣಿ, ಮಿತ್ರ, ಸುನಿಲ್ ಮೊದಲಾದ ಕಲಾವಿದರ ದಂಡೇ ಚಿತ್ರದಲ್ಲಿ ಇದೆ. ಚಿತ್ರ ಉತ್ತಮವಾಗಿ ಮೂಡಿಬಂದಿದೆ.
ಅಕ್ಟೋಬರ್ ಅಂತ್ಯದಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಚಲನಚಿತ್ರ ಪ್ರೇಮಿಗಳು ಭಾಗವಹಿಸಬೇಕು ಹಾಗೂ ಚಲನಚಿತ್ರವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸುವ ಮೂಲಕ ಆಶೀರ್ವದಿಸಬೇಕು ಎಂದು ವಿನಂತಿಸಿದರು.
ಚಂದ್ರಶೇಖರ್ ಪೂಜಾರ್, ಬಿ. ಸಿದ್ದಪ್ಪ, ಎಂ.ಎಸ್. ಕೆಂಚಪ್ಪ, ಎಫ್.ಎಂ. ರವಿಕುಮಾರ್, ಕೆ. ವಾಗೀಶ್, ಗಂಗಾಧರಸ್ವಾಮಿ, ಎಚ್. ನಿಜಗುಣ, ವೀರೇಶ್ ಉಪಸ್ಥಿತರಿದ್ದರು.