ರಾಜರಾಜೇಶ್ವರಿನಗರ: ಹೆಮ್ಮಿಗೆಪುರದ ಕೇಶವ ಎಂಬ ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸುವಲ್ಲಿ ಪೋಲಿಸರು ಮೀನ-ಮೇಷ ಎಣಿಸುತ್ತಿದ್ದಾರೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು ಆರೋಪಿಸಿದರು.
ಇತ್ತೀಚೆಗೆ ಮೈಸೂರು ರಸ್ತೆ ರಾಮೋಹಳ್ಳಿ ಕ್ರಾಸ್ ಬಳಿಯ ಡಾಬಾವೊಂದರಲ್ಲಿ ಕೇಶವ ಊಟ ಮಾಡಿ ಬಿಲ್ ಕೇಳಿದ ಸಂದರ್ಭದಲ್ಲಿ ಕೆಲವರು ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಇದರಿಂದ ಅವರ ತಲೆಗೆ ತೀವ್ರವಾದ ಪೆಟ್ಟು ಬಿದ್ದಿತ್ತು. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪೊಲೀಸರು ದೂರು ದಾಖಲಿಸಿಕೊಂಡಿದ್ದರೂ ಆರೋಪಿಗಳನ್ನು ಬಂಧಿಸದ ಕ್ರಮವನ್ನು ತೀವ್ರವಾಗಿ ದೇವೇಗೌಡರು ಖಂಡಿಸಿದ್ದರು.
ಪ್ರಭಾವಿ ಸಚಿವರೊಬ್ಬರ ಕೈವಾಡದಿಂದ ಹಲ್ಲೆಗೊಳಗಾದ ಯುವಕನಿಗೆ ನ್ಯಾಯ ಸಿಗುತ್ತಿಲ್ಲ. ಈ ಬಗ್ಗೆ ರಾಮನಗರ ಜಿಲ್ಲಾ ಪೋಲೀಸ್ ವರಿಷ್ಠರ ಜತೆ ಚರ್ಚಿಸಲಾಗಿದೆ. ಆರೋಪಿಗಳನ್ನು ಕೂಡಲೇ ಬಂಧಿಸದಿದ್ದರೆ ಡಿಐಜಿಗೆ ದೂರು ನೀಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಹಲ್ಲೆಗೊಳಗಾದ ಯುವಕ ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಆತನ ಆರೋಗ್ಯ ವಿಚಾರಿಸಿದರು.