ಗೋಣಿಕೊಪ್ಪಲು: ಪಟ್ಟಣದಲ್ಲಿ 15 ದಿನಗಳ ಹಿಂದೆ ನಡೆದ ಹಲ್ಲೆ ಮತ್ತು ಗುಂಪು ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸೋಮವಾರ ಒಂಬತ್ತು ಮಂದಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ವಿರಾಜಪೇಟೆ ತಾಲ್ಲೂಕು ಹಿಂದು ಜಾಗರಣಾ ವೇದಿಕೆಯ ಸಂಘಟನಾ ಸಂಚಾಲಕ ಎಸ್. ಆರ್.ಸುಬ್ರಮಣಿ ಅವರ ಮೇಲಿನ ಹಲ್ಲೆಗೆ ಸಂಬಂಧ ಪಟ್ಟಂತೆ ಐವರನ್ನು ಬಂಧಿಸಲಾಗಿದೆ. ಮಾಪಿಳ್ಳೆತೋಡಿನ ಎ.ಎ. ಸಮ್ಮದ್, ಬೇಗೂರು ಚೇನಿವಾಡದ ಎ.ಯು.ಸೈನುದ್ದೀನ್, ಕೆ.ಎ.ಮೊಯ್ದು, ಎಂ.ಎಂ.ನಾಸೀರ್, ಮುಗುಟಗೇರಿಯ ಖಾಲಿದ್ ಬಂಧಿತರು.
ಎ.ಎ.ಸಮ್ಮದ್ನನ್ನು ಮಡಿಕೇರಿ ಬಳಿ ಕರ್ಣಂಗೇರಿಯ ಆತನ ಸಂಬಂಧಿಕರ ಮನಯಲ್ಲಿ ದಸ್ತಗಿರಿ ಮಾಡಿದ್ದರೆ, ಉಳಿದವರನ್ನು ಬೇಗೂರಿನಲ್ಲಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ಇದುವರೆಗೆ ಈ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 7 ಮಂದಿಯನ್ನು ಬಂಧಿಸಿದಂತಾಗಿದೆ.
ಹಲ್ಲೆಯ ಮಾರನೇ ದಿನ ಪಟ್ಟಣದ ಮಾರುಕಟ್ಟೆಯಲ್ಲಿ ನಡೆದ ಗುಂಪು ಘರ್ಷಣೆಗೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ. ಅರುವತ್ತೊಕ್ಕಲು ಗ್ರಾಮದ ಸೆಂದಿಲ್ ಕುಮಾರ್, ತಿತಿಮತಿ ಜನತಾ ಕಾಲೊನಿಯ ಎಚ್.ಎಂ.ಶಿವು, ಪೊನ್ನಂಪೇಟೆಯ ಸಿ.ಎನ್.ಜೋಯಪ್ಪ, ಚೆರಿಯಪಂಡ ಎಂ.ಪೆಮ್ಮಯ್ಯ ಬಂಧಿತರು. ಇವರನ್ನು ಗೋಣಿಕೊಪ್ಪಲು ಪಟ್ಟಣದಲ್ಲಿ ದಸ್ತಗಿರಿ ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಡಿವೈಎಸ್ಪಿ ಅಣ್ಣಪ್ಪ ನಾಯಕ ಘಟನೆಗೆ ಸಂಬಂಧಿಸಿ ತನಿಖೆ ಮುಂದುವರಿದಿದೆ. ತಿತಿಮತಿಯ ಪ್ರಾರ್ಥನಾ ಮಂದಿರದ ಗೋಡೆಯ ಮೇಲೆ ಮಸೀದಿಯಲ್ಲಿ ಬರೆದ ಆರೋಪಿಗಳನ್ನು ಕೂಡಲೇ ಬಂಧಿಸಲಾಗುವುದು ಎಂದರು.
ಕಾರ್ಯಾಚರಣೆಯಲ್ಲಿ ತನಿಖಾ ತಂಡದ ಮುಖ್ಯಸ್ಥ ಹಾಗೂ ವೃತ್ತ ನಿರೀಕ್ಷಕ ಶೈಲೇಂದ್ರ, ಸಬ್ಇನ್ಸ್ಪೆಕ್ಟರ್ ಸುರೇಶ್ ಕುಮಾರ್, ಸಿಬ್ಬಂದಿ ಉದಯ್, ಚಂದ್ರು, ಅನಿಲ್, ಮಹೇಶ್, ದೇವರಾಜು, ರಾಧಾ, ಪೊನ್ನಂಪೇಟೆ ಠಾಣೆಯ ರಮೇಶ್, ಮಡಿಕೇರಿ ಅಪರಾಧ ವಿಭಾಗದ ಯೋಗೇಶ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.