ಶೃಂಗೇರಿ: ರೈತರಿದ್ದರೆ ನಾವು. ಆತನೇ ಈ ದೇಶದ ಬೆನ್ನೆಲುಬು ಎಂದೇ ಕೃಷಿಕರಿಗೆ ಕೃತಜ್ಞತೆ ಸಲ್ಲಿಸಿರುವ ಜಿಲ್ಲಾ ಪಂಚಾಯಿತಿ ಶೃಂಗೇರಿ ಕ್ಷೇತ್ರದ ನೂತನ ಸದಸ್ಯ ಬಿಜೆಪಿಯ ಬಿ.ಶಿವಶಂಕರ್(ಶೃಂಗೇರಿ ಶಿವಣ್ಣ), ಅಡಿಕೆಗೆ ತಗುಲಿದ ಹಳದಿ ಎಲೆ ರೋಗದಿಂದ ರೈತರು ಸಂಕಷ್ಟಕ್ಕೊಳಗಾಗಿದ್ದು, ಅವರ ಸಮಸ್ಯೆಗೆ ಸ್ಪಂದಿಸಿ ಪರಿಹಾರ ಕಂಡುಕೊಳ್ಳಲು ಶ್ರಮಿಸುವೆ ಎಂದಿದ್ದಾರೆ.
ಕ್ಷೇತ್ರದ ಸಂಸದರ ಜತೆ ಚರ್ಚಿಸಿ ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ತಕ್ಕ ರೀತಿ ಸ್ಪಂದಿಸುವೆ. ಹಳದಿ ಎಲೆ ರೋಗ ದಿಂದಾಗಿಯೇ ಅಡಿಕೆ ಬೆಳೆಗಾರರು ಗುಳೆ ಹೋಗುತ್ತಿ ರುವುದನ್ನು ತಪ್ಪಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಬದ್ಧತೆಯ ಮಾತು ಹೇಳಿದ್ದಾರೆ.
*ನಿಮಗೆ ಒಮ್ಮೆಯಾದರೂ ಈ ರಾಜಕೀಯ ಸಾಕು ಎನ್ನಿಸಲಿಲ್ಲವಾ ?
ಸಾಕು ಎನ್ನಿಸಿದ್ದರೆ ನಾನೇಕೆ ಎರಡನೇ ಬಾರಿ ಸ್ಪರ್ಧಿಸುತ್ತಿದ್ದೆ? ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಹೇಳುವಂತೆ ರಾಜಕೀಯ ನಮ್ಮ ಆಯ್ಕೆಯ ಕ್ಷೇತ್ರವಾಗಬೇಕು. ಆಯ್ಕೆ ಮಾಡಿಕೊಂಡಿದ್ದೇನೆ- ಯಶಸ್ವಿಯೂ ಆಗಿದ್ದೇನೆ.
* ಕ್ಷೇತ್ರ ಕುರಿತು ನಿಮ್ಮ ಕನಸುಗಳೇನು?
ಜನರ ನಡುವೆ ಇದ್ದು ಅವರ ಸುಖ-ದುಃಖದಲ್ಲಿ ಪಾಲುದಾರನಾಗಬೇಕು. ಕೈಲಾದ ಮಟ್ಟಿಗೆ ಸ್ಪಂದಿಸಬೇಕು.
* ಕ್ಷೇತ್ರ ವ್ಯಾಪ್ತಿಯಲ್ಲಿ ನೀವು ಹಾಕಿಕೊಂಡಿರುವ ಅಭಿವೃದ್ಧಿ ಯೋಜನೆಗಳು?
ಪರಿಶಿಷ್ಟ ಜಾತಿ-ಪಂಗಡದವರಿಗಾಗಿ ಇರುವ ಶೇ. 22ಅನುದಾನ ಬಳಕೆಯೊಂದಿಗೆ ಪರಿಶಿಷ್ಟ ಜಾತಿ- ಪಂಗಡದವರ ಕಾಲೊನಿಗಳಲ್ಲಿ ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವುದು. ರೈತರ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಹೈನುಗಾರಿಕೆಗೆ ಪ್ರೋತ್ಸಾಹ, ಸ್ತ್ರೀಶಕ್ತಿ ಗುಂಪುಗಳಿಗೆ ಗಿರಿರಾಜ ಕೋಳಿ ಸಾಕಾಣಿಕೆಗೆ ಸಹಾಯ, ಆ ಮೂಲಕ ಆರ್ಥಿಕ ಸ್ವಾವಲಂಬನೆ, ಸರ್ಕಾರ ಹಾಗೂ ಸರ್ಕಾ ರೇತರ ಸಂಸ್ಥೆಗಳೊಂದಿಗೆ ಸೇರಿ ನೈಸರ್ಗಿಕ ನೀರು ತಂದು ಕುಡಿಯುವ ನೀರು ಯೋಜನೆ ಅಭಿವೃದ್ಧಿ ಪಡಿಸು ವುದು, ಟರ್ಬೊ ವಿದ್ಯುದ್ದೀಕರಣಕ್ಕೆ ಪ್ರೋತ್ಸಾಹ, ರಾಜೀವ್ಗಾಂಧಿ ವಿದ್ಯುದ್ದೀಕರಣ ಯೋಜನೆ ಚುರುಕುಗೊಳಿಸುವುದು ಇವು ನನ್ನ ಯೋಜನೆಗಳು.
* ನಕ್ಸಲ್ ಹೋರಾಟ ಸಾಮಾಜಿಕ ನ್ಯಾಯಕ್ಕಾಗಿ ಎಂಬುದನ್ನು ಒಪ್ಪುವಿರಾ?
ನಕ್ಸಲ್ ಹೋರಾಟ ಸಾಮಾಜಿಕ ನ್ಯಾಯ ಕ್ಕಾಗಿ ಯೇ-ಅಲ್ಲವೇ? ಎಂಬುದಕ್ಕಿಂತಾ ನಮ್ಮ ಹೋರಾಟ, ಅಭಿವೃದ್ಧಿ ಕಾರ್ಯಗಳು ಸಾಮಾಜಿಕ ನ್ಯಾಯ ನೀಡುವುದಕ್ಕಾಗಿ. ನಕ್ಸಲ್ ಭಾದಿತ ಪ್ರದೇಶಗಳಲ್ಲಿ ಈ ಹಿಂದೆಯೂ ಅನೇಕ ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ಹುಲುಗಾರುಬೈಲಿನಲ್ಲಿ ಗಿರಿಜನರಿಗಾಗಿ ನೇಯ್ಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದೀಗ ಬೇಗಾರು, ದೇವಾ ಲೆಕೊಪ್ಪದಲ್ಲಿ ಸದ್ಯದಲ್ಲಿಯೇ ಚಾಲನೆ ನೀಡಲಾ ಗುವುದು. ಬಡ ಕುಟುಂಬಗಳ ಯುವಕರಿಗೆ ಜೇನು ಕೃಷಿ, ನೇಯ್ಗೆ, ಹೊಲಿಗೆ, ವಾಹನ ಚಾಲನೆ ತರಬೇತಿ ನೀಡಿ ಸ್ವಾವಲಂಬಿ ಬದುಕಿಗೆ ನಾಂದಿ ಹಾಡುವ ಹಲವಷ್ಟು ಕಾರ್ಯಕ್ರಮಗಳಿಗೆ ಪ್ರಾಮಾಣಿಕ ಯತ್ನ ಮುಂದುವರೆಸುವೆ. ದಾಖಲೆಯೇ ಇಲ್ಲದ ಗಿರಿಜನರ ಅರಣ್ಯ ಒತ್ತುವರಿ ಸಂಬಂಧಿಸಿ ಸದ್ಯದಲ್ಲಿಯೇ 843 ಮಂದಿಗೆ ಅರಣ್ಯ ಹಕ್ಕುಪತ್ರ ನೀಡಲಾಗುವುದು.
* ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಇವೆಲ್ಲವೂ ಸಾಧ್ಯವೇ?
ಖಂಡಿತಾ ಸಾಧ್ಯ. ಇಚ್ಛಾಶಕ್ತಿ ಇರಬೇಕು ಅಷ್ಟೆ. ಮೊದಲ ಅವಧಿಯಲ್ಲಿ ಇಲಾಖೆ ಹಾಗೂ ಕಾರ್ಯ ಯೋಜನೆ ಅರಿಯಲೇ ಸಾಕಷ್ಟು ಸಮಯ ಬೇಕಾ ಯಿತು. ಈಗ ಅನುಭವದ ಆಧಾರ ಕಾರ್ಯ ನಿರ್ವಹಿಸುವೆ.
* ಅಭಿವೃದ್ಧಿ ಕೆಲಸಗಳಿಗೆ ಸಂಪನ್ಮೂಲ ಹೇಗೆ ಕ್ರೋಢೀಕರಿಸುವಿರಿ?
ಜಿ.ಪಂ ಅನುದಾನದ ಜತೆಗೇ ವಿವಿಧ ಇಲಾಖೆ ಹಾಗೂ ನಿಗಮ ಮಂಡಳಿ, ಶಾಸಕರು, ಸಂಸದರ ಅನು ದಾನವನ್ನೂ ಬಳಸಿಕೊಳ್ಳಲು ಯತ್ನಿಸುವೆ. ಪಶ್ಚಿಮ ಘಟ್ಟ ಯೋಜನೆಯ ಅನುದಾನ ತಂದು ಕಾಲುಸಂಕ, ಸೇತುವೆ ನಿರ್ಮಿಸಲಾಗುವುದು. ತೆಂಗು-ನಾರು ಅಭಿವೃದ್ಧಿ ಮಂಡಳಿ ಅನುದಾನ ಬಳಕಯೆ ಯತ್ನ. ಪ್ರಾಣಿಗಳಿಂದ ಬೆಳೆ ಹಾನಿ ತಡೆಯಲು ವನ್ಯಜೀವಿ ಇಲಾಖೆ ಮೂಲಕ ರಿಯಾಯತಿ ದರದಲ್ಲಿ ಬ್ಯಾಟರಿ ಚಾಲಿತ ಬೇಲಿ ನಿರ್ಮಿಸಿಕೊಡಲು ಯತ್ನಿಸುವೆ.
‘ರೈತರ ಗುಳೆ ತಪ್ಪಿಸುವ ಜವಾಬ್ದಾರಿ’
‘ಅನುಭವದ ಆಧಾರದಲ್ಲಿ ಕಾರ್ಯ’ ಎಂಬ ವಿಶ್ವಾಸ ಬಿ.ಶಿವಶಂಕರ್ ಯಾನೆ ಶೃಂಗೇರಿ ಶಿವಣ್ಣ ಅವ ರದ್ದು. ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಚುನಾವಣೆಯಲ್ಲಿಯೇ ಶೃಂಗೇರಿ ಗ್ರಾಮಾಂತರ(ಕಸಬಾ) ಕ್ಷೇತ್ರದಿಂದ ಆಯ್ಕೆ. ಮೆಣಸೆ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸ ಲಾದಾಗ ಪುನರಾಯ್ಕೆ ಬಯಸಿದ ಶಿವಣ್ಣ, 8949 ಮತಗಳಲ್ಲಿ 4553 ಮತ ಪಡೆದು (1823 ಮತಗಳ ಮುನ್ನಡೆ) ವಿಜಯಿಯಾದರು. ಚುಟುಕು ಸಾಹಿತ್ಯ ರಚನೆ ಮೂಲಕ ಚುಟುಕು ಸಾಹಿತ್ಯ ಪರಿಷತ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕಗಳಲ್ಲಿ ಸಕ್ರಿಯ. 1969ರಲ್ಲಿ ಶೃಂಗೇರಿಯಲ್ಲಿ ಜನನ. ತಂದೆ-ಬಂಗಾರು ಸ್ವಾಮಿ, ತಾಯಿ- ಶಾರದಮ್ಮ, ಪತ್ನಿ-ಕಲ್ಪನಾ, ಮಗಳು-ಕಾವ್ಯಶ್ರೀ. ತಂದೆಯ ಕಾಲಾನಂತರ ಕಟ್ಟಡ ನಿರ್ಮಾಣ ವೃತ್ತಿ ಮುಂದುವರೆಸಿದ ಶಿವಣ್ಣ, ಸದ್ಯ ಕ್ಷೇತ್ರದ ಅಭಿವೃದ್ಧಿ ಕುರಿತು ಹಲವು ಕನಸು ಹೊಂದಿದ್ದಾರೆ. ವಿಳಾಸ: ಬಿ.ಶಿವಶಂಕರ್ ಯಾನೆ ಶೃಂಗೇರಿ ಶಿವಣ್ಣ, ‘ಕಾವ್ಯಶ್ರೀ’, ಶಾರದಾ ನಗರ, ಶೃಂಗೇರಿ-577139 ಮೊ: 94487 75826
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.