ಕೊಪ್ಪ: ಹಳದಿ ಎಲೆರೋಗ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ಪ್ಯಾಕೇಜನ್ನು ಪ್ರಕಟಿಸಿದರೆ ರಾಜ್ಯದ ಪಾಲು ನೀಡಲು ಸಿದ್ಧ ಎಂದು ಶಾಸಕ ಡಿ.ಎನ್.ಜೀವರಾಜ್ ಹೇಳಿದರು.
ತಾಲ್ಲೂಕಿನ ಗುಡ್ಡೇತೋಟ ಗ್ರಾ.ಪಂ. ಆವರಣದಲ್ಲಿ ಸೋಮವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಹಾಗೂ ಹೊಸ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಸರ್ಕಾರ ಅಡಿಕೆ ಹಳದಿ ಎಲೆರೋಗ ಪೀಡಿತರ ಸಂಕಷ್ಟಕ್ಕೆ ಸ್ಪಂದಿಸಿದೆ. ಸಂಶೋಧನಾ ಕೇಂದ್ರ ಸ್ಥಾಪಿಸಿದ್ದೇವೆ. ಬೆಳೆಗಾರರ ಸಮೀಕ್ಷೆ ನಡೆಸಿದ್ದೇವೆ. ಆಯವ್ಯಯದಲ್ಲಿ ಅನುದಾನ ಒದಗಿಸಿರುವುದಲ್ಲದೆ ಮುಖ್ಯಮಂತ್ರಿಗಳ ನಿಯೋಗದ ಮೂಲಕ ಪ್ರಧಾನ ಮಂತ್ರಿ ಗಮನ ಸೆಳೆದಿದ್ದೇವೆ ಎಂದ ಅವರು, ರಾಜ್ಯ ಆಯವ್ಯಯದಲ್ಲಿ ಸಂತ್ರಸ್ತರ ಪರಿಹಾರಕ್ಕೆ ಹಣ ಒದಗಿಸಲು ಮುಖ್ಯಮಂತ್ರಿಗಳನ್ನು ಕೋರಿದ್ದೇವೆ ಎಂದರು
ಹುಲಿ ಯೋಜನೆ ನಮ್ಮ ಕೂಸಲ್ಲ ಎಂದು ಪುನರುಚ್ಚರಿಸಿದ ಅವರು, ಕೇಂದ್ರ ಸರ್ಕಾರ ಅನುಷ್ಠಾನಗೊಳಿಸುತ್ತಿರುವ ಯೋಜನೆಗೆ ಕಾಂಗ್ರೆಸ್ಸಿಗರು ಅಪಸ್ವರ ಎತ್ತುತ್ತಿದ್ದು, ವಿನಃ ಕಾರಣ ರಾಜ್ಯ ಸರ್ಕಾರವನ್ನು ಹೊಣೆ ಮಾಡುತ್ತಿದಾರೆ ಎಂದು ದೂರಿದರು.
ಗುಡ್ಡೆತೋಟದ ನೆಲಮಟ್ಟದ ನೀರು ಸಂಗ್ರಹಣಾ ತೊಟ್ಟಿ, ಮಸ್ಕಲ್ವಾರೆ ಕಿರುನೀರು ಸರಬರಾಜು ಯೋಜನೆ, ಅತ್ತಿಕೊಡಿಗೆ ಗ್ರಾ.ಪಂ.ನ ಮೆಣಸಿನಹಾಡ್ಯ, ಬಲಿಗೆ, ಹೊರನಾಡು ರಸ್ತೆ ಅಭಿವೃದ್ಧಿ ಕಾಮಗಾರಿ, ಕಲ್ಲುಗುಡ್ಡೆ ರಂಗಮಂದಿರ, ಬಿಳಾಲುಕೊಪ್ಪ, ಅಂಗಡಿ ಮಳಿಗೆ ನಿರ್ಮಾಣ, ಹಿರೇಗದ್ದೆ ಗ್ರಾ.ಪಂ.ನ ಅರಳಿಕೊಪ್ಪ ನೀರು ಸರಬರಾಜು ಯೋಜನೆಯನ್ನು ಜೀವರಾಜ್ ಉದ್ಘಾಟಿಸಿದರು.
ಗುಡ್ಡೇತೋಟ ರಾಜೀವ್ ಗಾಂಧಿ ಸೇವಾ ಕಟ್ಟಡ ನಿರ್ಮಾಣ, ಅತ್ತಿಕೊಡಿಗೆ ಪಡಿತರ ವಿತರಣಾ ಕೇಂದ್ರ , ಕೊಗ್ರೆ ರಸ್ತೆ ಅಭಿವೃದ್ಧಿ, ಬರ್ಕನಘಟ್ಟ ರಸ್ತೆ ಅಭಿವೃದ್ಧಿ, ಜಯಪುರ ಹಿರೆಗದ್ದೆ ರಸ್ತೆ ಅಭಿವೃದ್ಧಿ, ಎಮ್ಮನಹಡ್ಲು ಕಿರು ನೀರು ಸರಬರಾಜು ಯೋಜನೆ ಹಾಗೂ ಕೂವೆ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಲಾಯಿತು.
ಜಿ.ಪಂ.ಅಧ್ಯಕ್ಷೆ ಸುಚಿತ್ರಾ ನರೇಂದ್ರ, ಸದಸ್ಯ ರವೀಂದ್ರ ಕುಕ್ಕಡಿಗೆ, ಅನ್ನಪೂರ್ಣ ಚನ್ನಕೇಶವ, ತಾ.ಪಂ.ಅಧ್ಯಕ್ಷೆ ಪದ್ಮಾವತಿ, ಉಪಾಧ್ಯಕ್ಷ ಬಿ.ಆರ್.ನಾರಾಯಣ, ಸ್ಥಾಯಿ ಸಮಿತಿ ಅಧ್ಯಕ್ಷ ಪೂರ್ಣಚಂದ್ರ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಎಸ್.ಎನ್.ರಾಮಸ್ವಾಮಿ, ತಾ.ಪಂ.ಸದಸ್ಯೆ ಸುಜಾತ, ಲಲಿತ, ಗುಡ್ಡೇತೋಟ ಗ್ರಾ.ಪಂ.ಅಧ್ಯಕ್ಷ ಜಿ.ಎಸ್.ರವೀಂದ್ರ, ಅತ್ತಿಕೊಡಿಗೆ ಗ್ರಾ.ಪಂ.ಅಧ್ಯಕ್ಷೆ ಸುನಂದ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.