ಬೆಂಗಳೂರು: ಮೈಸೂರು- ಚೆನ್ನೈ ಕಾವೇರಿ ಎಕ್ಸ್ಪ್ರೆಸ್ ರೈಲು ಸೋಮವಾರ ಮುಂಜಾನೆ ಆಂಧ್ರ ಪ್ರದೇಶದ ಚಿತ್ತೂರಿನ ಕುಪ್ಪಂ ಬಳಿ ಹಳಿ ತಪ್ಪಿದ ಪರಿಣಾಮ ಸುಮಾರು 20ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿರುವುದು ವರದಿಯಾಗಿದೆ.
ಚಿತ್ತೂರು ಭಾಗದಲ್ಲಿ ಭಾರಿ ಮಳೆ ಬೀಳುತ್ತಿರುವ ಪರಿಣಾಮ ಹಳಿಗಳು ಸಡಿಲಗೊಂಡಿವೆ. ಇದರಿಂದಾಗಿ ಕಾವೇರಿ ಎಕ್ಸ್ಪ್ರೆಸ್ ರೈಲು ಹಳಿತಪ್ಪಿದೆ. ಎಂಜಿನ್ ಸೇರಿದಂತೆ ನಾಲ್ಕು ಬೋಗಿಗಳು ಉರುಳಿವೆ. ಈ ದುರ್ಘಟನೆಯಿಂದಾಗಿ 20ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿರುತ್ತಾರೆ. ಗಾಯಗೊಂಡವರನ್ನು ಚಿತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆಯಲ್ಲಿ ಸಿಲುಕಿದ ಇತರೆ ಪ್ರಯಾಣಿಕರಿಗೆ ಬಸ್ಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಈ ಪ್ರದೇಶದಲ್ಲಿ ಭಾರಿ ಮಳೆ ಬೀಳುತ್ತಿದ್ದರಿಂದ ರಕ್ಷಣಾ ಕಾರ್ಯಕ್ಕೆ ಅಡಚಣೆ ಉಂಟಾಗಿದೆ. ಈ ಘಟನೆಯಿಂದಾಗಿ ಈ ಭಾಗದಲ್ಲಿನ ರೈಲುಗಳ ಸಂಚಾರ ಅಸ್ತವ್ಯಸ್ಥಗೊಂಡಿದ್ದು, ಕೆಲ ಸಮಯ ರೈಲುಗಳ ಸಂಚಾರ ಮಾರ್ಗವನ್ನು ತಾತ್ಕಾಲಿಕವಾಗಿ ಬದಲಾಯಿಲಾಗಿದೆ ಎಂದು ಮೂಲಗಳು ತಿಳಿಸಿವೆ.