ದೇವನಹಳ್ಳಿ: ಶಾಲೆಗಳಲ್ಲಿ ಶಿಕ್ಷಕರನ್ನು ಗೌರವಿಸುವ ಮನೋಧರ್ಮದ ಶಿಷ್ಯರು ಕಡಿಮೆಯಾಗುತ್ತಿದ್ದಾರೆ ಎಂದು ಆಂಗ್ಲ ಉಪನ್ಯಾಸಕಿ ಫಾತಿಮಾ ಬಿ ವಿಷಾದಿಸಿದರು.
ದೇವನಹಳ್ಳಿ ಕಾರ್ಮೆಲ್ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳು ಭಾನುವಾರ ಏರ್ಪಡಿಸಿದ್ದ `ಪ್ರೌಢಶಾಲಾ ವ್ಯಾಸಂಗದಲ್ಲಿ ನಮ್ಮ ನಡವಳಿಕೆ ಒಂದು ನೆನಪು~ ಹಾಗೂ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಮತ್ತು ಶಿಕ್ಷಕರ ಸಂಬಂಧಗಳು ಬರಿಯ ನೆನಪಾಗಬಾರದು. ಅವು ಜೀವನದುದ್ದಕ್ಕೂ ಶಾಶ್ವತಗೊಳ್ಳಬೇಕು. ಈ ಭಾವನಾತ್ಮಕ ಬೆಸುಗೆ ಮುಂದಿನ ಪೀಳಿಗೆಗೂ ಅವಶ್ಯಕ ಎಂದು ಹೇಳಿದರು.
ಗಣಿತ ಶಿಕ್ಷಕಿ ಕೆ.ಎನ್.ಗೀತಾ ಮಾತನಾಡಿ, ಪೋಷಕರು ಗುರು ಪರಂಪರೆಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂದರು.
ಹಳೇ ವಿದ್ಯಾರ್ಥಿಗಳಾದ ಟಿ.ಎಸ್. ಮಧು, ಲೀಲಾ ಯಾದವ್ ತಮ್ಮ ಅನಿಸಿಕೆ ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಹಳೇ ವಿದ್ಯಾರ್ಥಿಗಳಿಂದ ಶಿಕ್ಷಕರನ್ನು ಸನ್ಮಾನಿಸಲಾಯಿತು.