ನೆಲಮಂಗಲ: ಇಲ್ಲಿಗೆ ಸಮೀಪದ ಗೊಲ್ಲಹಳ್ಳಿ ಬಳಿ ಬಿಎಂಟಿಸಿ ಬಸ್ಸೊಂದು ಬ್ಲೇಡ್ ತುಂಡಾಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಸುಮಾರು 30 ಅಡಿ ಆಳದ ಹಳ್ಳಕ್ಕೆ ಮಗುಚಿ ಬ್ದ್ದಿದು ಚಾಲಕ, ನಿರ್ವಾಹಕ ಸೇರಿ 8 ಮಂದಿಗೆ ಗಾಯಗಳಾಗಿವೆ.
ಗಾಯಗೊಂಡವರನ್ನು ಗೊಲ್ಲಹಳ್ಳಿ ಸುತ್ತಮುತ್ತಲ ಗ್ರಾಮದವರಾದ ವೆಂಕಟರಾಯಪ್ಪ, ನಾಗಮ್ಮ, ಆಂಜನಮ್ಮ, ಪುಟ್ಟಪ್ಪ, ಆನಂದಮೂರ್ತಿ, ಸಿದ್ದಗಂಗಮ್ಮ ಎಂದು ಗುರುತಿಸಲಾಗಿದೆ. ಬಸ್ಸಿನ ಚಾಲಕ ಮುನಿಯಪ್ಪ, ನಿರ್ವಾಹಕ ಶಿವಶಂಕರ ಅವರಿಗೂ ಗಾಯಗಳಾಗಿವೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 22 ಮಂದಿಯ ಪೈಕಿ ಉಳಿದವರಿಗೆ ಸಣ್ಣ ಗಾಯಗಳಾಗಿವೆ.
ಯಲಹಂಕ- ನೆಲಮಂಗಲ ಮಾರ್ಗ ನಡುವೆ ಸಂಚರಿಸುವ 407 ಸಂಖ್ಯೆಯ ಬಸ್ ನೆಲಮಂಗಲಕ್ಕೆ ಆಗಮಿಸುತ್ತಿದ್ದಾಗ ಬೆಳಿಗ್ಗೆ 7.30ರ ಬಳಿ ಗೊಲ್ಲಹಳ್ಳಿ ಬಳಿ ಈ ಅಪಘಾತ ಸಂಭವಿಸಿದೆ. ಭಾನುವಾರ ರಜಾ ದಿನವಾಗಿದ್ದರಿಂದ ಬಸ್ಸಿನಲ್ಲಿ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆಯಿತ್ತು. ಹಳ್ಳಕ್ಕೆ ಬಸ್ ಬಿದ್ದಿದ್ದರಿಂದ ಅದರ ಮುಂದಿನ ಚಕ್ರದ ಬ್ಲೇಡ್ ತುಂಡಾಗಿದೆ.
`ಸುಮಾರು 8 ವರ್ಷಗಳಿಂದ ಇದೇ ಮಾರ್ಗದಲ್ಲಿ ಚಾಲನೆ ಮಾಡುತ್ತಿರುವ ಅನುಭವೀ ಚಾಲಕ ಮುನಿಯಪ್ಪ ಅವರ ಚಾಣಾಕ್ಷತೆಯಿಂದ 11 ಕೆ.ವಿ. ವಿದ್ಯುತ್ ಮಾರ್ಗದ ಎರಡು ಕಂಬಗಳ ಮಧ್ಯೆ ಬಸ್ ಇಳಿಸಿದ್ದರಿಂದ ಪ್ರಯಾಣಿಕರೆಲ್ಲರೂ ದುರಂತದಿಂದ ಪಾರಾದರು~ ಎಂದು ಆನಂದಮೂರ್ತಿ ಎಂಬುವವರು ತಿಳಿಸಿದರು.