ಬೆಂಗಳೂರು: ‘ನಗರಮುಖಿಯಾಗಿದ್ದ ರಂಗಭೂಮಿಯ ಕಿವಿಹಿಂಡಿ ಹಳ್ಳಿಗಳತ್ತ ಕೊಂಡೊಯ್ದವರು ಸಿ.ಜಿ.ಕೆ. ಸೃಜನಶೀಲ ಕಲಾವಿದ, ಒಳ್ಳೆಯ ಕುಶಲಕರ್ಮಿ’ ಎಂದು ರಂಗನಿರ್ದೇಶಕ ಪ್ರಸನ್ನ ಸ್ಮರಿಸಿದರು.
ರಂಗ ನಿರಂತರ ಸಾಂಸ್ಕೃತಿಕ ಸಂಘವು ಸಂಸ ಬಯಲು ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ‘ಸಿಜಿಕೆ ರಾಷ್ಟ್ರೀಯ ರಂಗೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ‘ರಂಗಭೂಮಿಯು ಮನರಂಜನೆ ಮತ್ತು ಜನಪರ ಚಳವಳಿ ಎರಡನ್ನೂ ಪ್ರತಿನಿಧಿಸಬೇಕು ಎಂಬುದನ್ನು ನೆನಪಿಸಿದವರು, ರಂಗ ಕಲಾವಿದರಿಗೆ ಕೀಳರಿಮೆಯೂ ಇಲ್ಲ ಮೇಲರಿಮೆಯೂ ಇಲ್ಲ ಎಂಬುದನ್ನು ತೋರಿಸಿದವರು ಸಿಜಿಕೆ’ ಎಂದು ನೆನಪಿಸಿದರು.
ನಟ ಪ್ರಕಾಶ ರೈ ಮಾತನಾಡಿ, ‘ಸಿಜಿಕೆ ಅವರು ನನಗೆ ನೇರವಾಗಿ ಗುರುಗಳಲ್ಲ. ಅವರು 150 ದಿನಗಳ ಪ್ರಯೋಗಾತ್ಮಕ ರಂಗೋತ್ಸವವನ್ನು ಏರ್ಪಡಿಸಿದಾಗ ನನ್ನ ಊರು, ಹೆಸರು ಏನೆಂದು ಕೇಳದೆ ನನಗೆ ಮೂರು ನಾಟಕಗಳಲ್ಲಿ ಭಾಗವಹಿಸಲು ಅವಕಾಶ ನೀಡಿದರು. ಆ ನಾಟಕಗಳ ಪಾತ್ರ ಮಾಡುವಾಗಲೇ ಅವರಿಂದ ಬಹಳಷ್ಟು ಕಲಿತೆ’ ಎಂದು ನೆನಪಿಸಿಕೊಂಡರು.
ಸಾಹಿತಿ ಕೆ.ಮರುಳಸಿದ್ದಪ್ಪ, ‘ಸಿಜಿಕೆ ಅಪರೂಪದ ಸಂಘಟಕ. ಶಿಸ್ತು, ಶ್ರದ್ಧೆಯಿಂದ ರಂಗಭೂಮಿಗೆ ಅಕಾಡೆಮಿಕ್ ಸ್ವರೂಪ ನೀಡಿದವರು. ರಂಗಭೂಮಿ, ರಾಜಕೀಯ, ಸಾಮಾಜಿಕ ಬಳಗವನ್ನು ಒಟ್ಟು ಮಾಡಿ ಕಟ್ಟಿದವರು’ ಎಂದರು.
ಅಕಾಡೆಮಿಗಳಿಲ್ಲದೆ ಸಾಂಸ್ಕೃತಿಕ ನೀತಿಯೇಕೇ?
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಬಹಳ ನಿರೀಕ್ಷೆಗಳಿದ್ದವು. ಆದರೆ, ನಿರೀಕ್ಷೆಯಂತೆ ಸರ್ಕಾರದಿಂದ ಕೆಲಸಗಳು ಆಗುತ್ತಿಲ್ಲ. ಸರ್ಕಾರ ಅಸ್ತಿತ್ವಕ್ಕೆ ಬಂದು ಎಂಟು ತಿಂಗಳಾಗುತ್ತ ಬಂದರೂ ಅಕಾಡೆಮಿಗಳಿಗೆ ಅಧ್ಯಕ್ಷರ ನೇಮಕವಾಗಿಲ್ಲ. ಮುಂದೆ ಲೋಕಸಭಾ ಚುನಾವಣೆಯಿದೆ. ನೀತಿ ಸಂಹಿತೆ ಹೆಸರಿನಲ್ಲಿ ನೇಮಿಸುವ ಹಾಗಿಲ್ಲ ಎಂದು ಸರ್ಕಾರ ಸಬೂಬು ಹೇಳುತ್ತದೆ. ಇದರಿಂದ ಮತ್ತೆ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ತಡವಾಗುತ್ತದೆ. ಅಕಾಡೆಮಿಗಳಿಲ್ಲದೆ ಸಾಂಸ್ಕೃತಿಕ ನೀತಿ ನಿರೂಪಣೆ ಸಮಿತಿ ಏಕೆ ಬೇಕು?