ಹೊಸನಗರ: ತಾಲ್ಲೂಕಿನ ಘಟ್ಟಪ್ರದೇಶಗಳಿಂದ ಕೂಡಿದ ನಗರ ಕ್ಷೇತ್ರದಿಂದ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅಂತರದಲ್ಲಿ ಬಿಜೆಪಿಯಿಂದ ಆಯ್ಕೆಯಾದವರು ಶುಭಾ ಕೆ. ಮೂರ್ತಿ.ಪದವೀಧರೆಯಾದ ಅವರ ಹೆಸರು ಜಿ.ಪಂ. ಅಧ್ಯಕ್ಷ ಗಾದಿಯ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿಬರುತ್ತಿದೆ.
ಕ್ಷೇತ್ರದ ಬಗ್ಗೆ ಒಂದಿಷ್ಟು: ವಾರಾಹಿ ನದಿ ಇನ್ನೊಂದು ದಿಬ್ಬದ ಕೊರ್ನಕೋಟೆಯಿಂದ ಶರಾವತಿ ನದಿಯಾಚೆಯ ಹೆಬ್ಬಿಗೆ ತನಕ 48 ಮತಗಟ್ಟೆ ಇರುವ ಅತ್ಯಂತ ದೊಡ್ಡ ನಗರ ಕ್ಷೇತ್ರ.5 ಜಲವಿದ್ಯುತ್ ಯೋಜನೆ, ಗುಡ್ಡಗಾಡು, ನಕ್ಸಲ್ಪೀಡಿತ ಗ್ರಾಮಗಳು. ಶೋಲ ಅರಣ್ಯದಿಂದ ಕೂಡಿದ ಅಭಿವೃದ್ಧಿ ಕಾಣದ ಪ್ಪಟ ಮಲೆನಾಡು. ವಿರಳ ಮನೆಗಳು ಅಲ್ಲಿನ ಸಮಸ್ಯೆಗಳು ನೂರಾರು.
* ಸದ್ಯದ ಸಮಸ್ಯೆ-ಪರಿಹಾರ ಕುರಿತು?
ರಸ್ತೆ, ನೀರು, ವಿದ್ಯುತ್ ಕಾಣದ ಒಂಟಿ ಮನೆಯ ಹಳ್ಳಿಗಳಿಗೆ ಮೂಲಸೌಕರ್ಯಕ್ಕೆ ಆದ್ಯತೆ. ವರ್ಷಕ್ಕೆ 4 ಸಾವಿರ ಮಿ.ಮೀ ಮಳೆಯಾಗುವ, ಅತಿವೃಷ್ಟಿಗೆ ಪದೇ ಪದೇ ತುತ್ತಾಗುವ ಮಲೆನಾಡಿನ ಗ್ರಾಮಗಳಿಗೆ ಶಾಶ್ವತ ಪರಿಹಾರದ ಬಗ್ಗೆ ಚಿಂತನೆ. ಕೊಡಚಾದ್ರಿ, ಬಿದನೂರು ಕೋಟೆ, ಮಾಣಿ ಅಣೆಕಟ್ಟು ಸೇರಿದಂತೆ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು.
* ಅಧ್ಯಕ್ಷ ಗಾದಿಯ ಆಕಾಂಕ್ಷಿಯೇ?
ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಜಿಲ್ಲೆಯಲ್ಲಿಯೇ ಅತ್ಯಂತ ಹೆಚ್ಚು 3,648 ಮತಗಳ ಅಂತರದಿಂದ ಬಿಜೆಪಿಯಿಂದ ಗೆಲುವು. ಪದವೀಧರೆಯಾಗಿದ್ದೇನೆ, ಕುಟುಂಬದ ಮೇಲೆ ರಾಜಕೀಯವಾಗಿ ಕಪ್ಪುಚುಕ್ಕೆ ಇಲ್ಲ. ನಮ್ಮ ಕ್ಷೇತ್ರದಲ್ಲಿ ಶಾಸಕರೂ ಇಲ್ಲ. ಪತಿಯ ಸಜ್ಜನಿಕೆ, ಪ್ರಾಮಾಣಿಕತೆ, ಪಕ್ಷನಿಷ್ಠೆ, ಇದರ ಜತೆಗೆ, ಪಕ್ಷದ ವರಿಷ್ಠರ ಆಶೀರ್ವಾದ ದೊರೆತರೆ ಜಿ.ಪಂ. ಅಧ್ಯಕ್ಷಗಾದಿಗೆ ಆಕಾಂಕ್ಷಿ ಹೌದು.