ನವದೆಹಲಿ, (ಪಿಟಿಐ): ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಕಾರ್ಯಕ್ರಮದಡಿ ಉತ್ತಮ ಗುಣಮಟ್ಟದ ನೀರು ಪೂರೈಕೆಗಾಗಿ ವಿಶೇಷ ನಿಧಿ ಮತ್ತು ಇದನ್ನು ಜಾರಿ ಮಾಡಲು ಪಂಚಾಯತಿಗಳಿಗೆ ಹೆಚ್ಚಿನ ಅಧಿಕಾರ ನೀಡಲು ಕೇಂದ್ರ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ.
ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಕಾರ್ಯಕ್ರಮದಡಿ ಈಗ ನೀಡಲಾಗುತ್ತಿರುವ ಹಣಕಾಸು ನೀತಿಯಲ್ಲಿ ಸ್ವಲ್ಪ ಮಾರ್ಪಾಡು ಮಾಡಿ ಗ್ರಾಮ ಪಂಚಾಯತಿಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ.
ಸಾರ್ವಜನಿಕ ರಂಗದ ಮಹಾರತ್ನ ಮತ್ತು ನವರತ್ನ ಕಂಪೆನಿಗಳಿಗೆ ವಿದೇಶಿ ಕಚ್ಚಾ ಪದಾರ್ಥಗಳನ್ನು ಖರೀದಿಸಲು ಹೆಚ್ಚಿನ ಅಧಿಕಾರ ನೀಡುವ ಉದ್ದೇಶದ ಹೊಸ ನೀತಿಗೂ ಒಪ್ಪಿಗೆ ನೀಡಲಾಗಿದೆ. ಗ್ರಾಮೀಣ ನೀರು ಸರಬರಾಜು ಗುಣಮಟ್ಟದ ಮೇಲೆ ನಿಗಾ ಇಡಲು ವಿಶೇಷ ಘಟಕ ಸ್ಥಾಪಿಸಿ ಅದಕ್ಕೆ ಶೇ 3ರಷ್ಟು ಹಣ ನೀಡಲು ಒಪ್ಪಲಾಗಿದೆ.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿಗಳಿಗೆ ನೈಸರ್ಗಿಕ ವಿಕೋಪಕ್ಕಾಗಿ ಇದುವರೆಗೆ ನೀಡಲಾಗುತ್ತಿದ್ದ ಶೇ 5ರಷ್ಟು ಹಣವನ್ನು ಶೇ 3ಕ್ಕೆ ಇಳಿಸಲು ತೀರ್ಮಾನಿಸಲಾಗಿದೆ.